ಬುಧವಾರ, ಸೆಪ್ಟೆಂಬರ್ 5, 2012

"ಜನನಿ ತಾನೇ ಮೊದಲ ಗುರು"


"ರೊಂಯ್.....ರೊಂಯ್ ರೊಂಯ್ ರೊಂಯ್....."
         ನಾಲ್ಕು ವರ್ಷದ ಮಗ; ರಸ್ತೆಯಲ್ಲಿ ಅಮ್ಮ ಕೊಡಿಸಿದ ಪುಟ್ಟ ಕಾರಿನೊಡನೆ ಆಡುತ್ತಿದ್ದ. 
        ಎರಡು ವರ್ಷಕ್ಕೊಮ್ಮೆ ಬರುವ ಊರಿನ ಜಾತ್ರೆ ಅದ್ದೂರಿಯಿಂದಲೇ ಸಾಗುತ್ತಿದ್ದು, ಬಂದು ಹೋಗುವ ಜನ ಬಹಳೇ ಇದ್ದರು. ಆ ಸಮಯದಲ್ಲೇ ಎದುರು ಬಂದುನಿಂತ, ಅವನಿಗಿಂತ ಒಂದು-ಎರಡು ವರುಷದ ಹುಡುಗನನ್ನ; ಅವನು ಸುಮ್ಮನೇ ನಿಂತಿರುವುದನ್ನ ನೋಡಿ ತನ್ನ ಆಟದಲ್ಲಿ ಸೇರಿಸಿಕೊಂಡ. ಮಗ ಆಟವೇ ಆತನಾಗಿದ್ದನೋ ಎಂಬಂತೆ ಆತನೊಟ್ಟಿಗೆ ಆಟದಲ್ಲೇ ಮೈ-ಮರೆತ. ಕೆಲವು ಸಮಯ ಜೊತೆ ಸೇರಿ ಆಡುತ್ತೇ ಇರುವಂತಹ ಹುಡುಗ ಮಗನ ಕೈಯಲ್ಲಿರುವ ಕಾರನ್ನ ಕಸಿದುಕೊಂಡಿದ್ದೇ; ಒಂದೇ ಓಟ! ಮಗನಾದರೋ ಅವನನ್ನ ಅಟ್ಟಿಸಿ ಹಿಡಿಯಲು ಅಸಹಾಯಕನಾಗಿ, ಅಳುತ್ತಾ ಅಮ್ಮನಲ್ಲಿಗೆ ಬಂದ. 
         ಕಾಲಿ ಕೈಯಿಂದ, ಕಣ್ಣಿನ ತುಂಬಾ ನೀರನ್ನ ತುಂಬಿಕೊಂಡು ಬಂದ ಮಗ, ಬಿಕ್ಕಿ ಬಿಕ್ಕಿ ಅಳುತ್ತಾ ನಡೆದ ವಿಷಯವನ್ನ ಹೇಳಲು ಪ್ರಯತ್ನಿಸುತ್ತಾ, ಪೂರ್ತಿಗೊಳಿಸಲಾಗದೇ ಜೋರಾಗಿ ಅಳತೊಡಗಿದ. ವಿಷಯವನ್ನ ಅರ್ಥಮಾಡಿಕೊಂಡ ಅಮ್ಮ ಮಗನನ್ನ ಸಮೀಪ ಕರೆದು, ಮಡಿಲಲ್ಲಿ ಕುಳ್ಳಿರಿಸಿ, ಕಣ್ಣೀರನ್ನು ಒರೆಸುತ್ತಾ ಸಾಂತ್ವಾನದ ಧನಿಯಲ್ಲಿ, "ಯಾಕಪ್ಪಾ ಅಳುವುದು? ಹೋದಿದ್ದು ಹೋದದ್ದಾಯಿತಲ್ಲಾ! ಹೊಸತೊಂದು ತಂದರಾಯಿತು. ಅಷ್ಟಕ್ಕೇ ಯಾಕಿಷ್ಟು ಅಳುವುದು? ಬಾ ಇನ್ನೊಂದು ಕೊಡಿಸುತ್ತೇನೆ" ಎನ್ನುತ್ತಾ ಮತ್ತೆ ಜಾತ್ರೆಯ ಪೇಟೆಗೆ ಕರೆದೊಯ್ದು, ಹೊಸಕಾರನ್ನ ತೆಗೆಸಿ, ಮಗನ ಕೈಯಲ್ಲಿ ಇಡುತ್ತಾ, ಕಿಲ-ಕಿಲ ನಗುವನ್ನೂ ಮಗುವಿನ ಮುಖದಲ್ಲಿ ತುಂಬಿದಳು.
"ದಾರಿಯಲ್ಲಿ ಸಾಗುವವರನ್ನ ಆಟಕ್ಕೆ ಸೇರಿಸಿಕೊಂಡ ನಂತರ, ಇನ್ನಾದರೂ ಸ್ವಲ್ಪ ಜಾಗೃತೆಯಿಂದಿರು" ಎನ್ನುತ್ತಾ, ನಗು ಮುಖದಿಂದಲೇ ಮತ್ತೆ ಮಗನನ್ನ ಆಟಕ್ಕೆ ಕಳುಹಿಸಿದಳು.
                                                                                 *****
"ತಮಾ..."
".........................."
"ಏ ತಮಾ.........."
"ಏನಮ್ಮಾ...?"
"ಮನೆಗೆ ಬಾರೋ..."
"ಇನ್ನೊಂದು ಸ್ವಲ್ಪಹೊತ್ತು ಆಡಿ, ಬರುತ್ತೀನಮ್ಮಾ"
"ಆಡಿದ್ದು ಸಾಕು, ಬಾ ಬೇಗ"
        "ಊ ನ್ಹೂಂ... ಈಗ ಬರಲ್ಲ" ಎಂದಿದ್ದೇ ತಡ, ರಪ್ಪನೇ ಬೆನ್ನಿಗೊಂದು ಏಟು ಬಿದ್ದದ್ದು, ಅದರ ಬೆನ್ನಹಿಂದೆ-ಹಿಂದೆಯೇ ಇನ್ನೂ ನಾಲ್ಕು ಏಟು ರಫ-ರಫನೇ ಬಿದ್ದದ್ದೂ ಆಯಿತು. ದರ-ದರನೇ ಅಮ್ಮ ಮಗನನ್ನ ಮನೆಗೆ ಎಳೆದೊಯ್ದು, ಬಿಟ್ಟಳು.
ಚಿಕ್ಕವನಾಗಿದ್ದಾಗಿಂದ ಹಿಡಿದು ಈಗಿನ ಒಂಬತ್ತು ವಯಸ್ಸಿನ ವರೆಗೂ ಅಮ್ಮನ ಕೈಯಿಂದ ಏಟು ತಿಂದ ದಾಖಲೆಯೇ ಇಲ್ಲ. ಆದರೆ ಈಗ ಮೊದಲಬಾರಿ ಅಮ್ಮ  ತನ್ನ ಕೈರುಚಿ ಏಟಿನ ಮೂಲಕ ತೋರಿಸಿದ್ದಳು. ಬೆನ್ನು ಚುಮು ಚುಮುಗುಡುತ್ತಿತ್ತು. ಅಮ್ಮನ ಹತ್ತಿರ ಏಟು ತಿಂದೆನಲ್ಲ ಎಂದು ಮನಸ್ಸು ನೋಯುತಿತ್ತು. ಹಾಗೇ ಕೆಲವು ದಿನಗಳಲ್ಲಿಯೇ ಏಟಿನ ನೋವು ಮರೆಯಾಯಿತು. ಆದರೆ ಹೊಡೆಸಿಕೊಂಡದ್ದು ಮಾತ್ರಾ ಮನಸ್ಸು ಮರೆತಿರಲಿಲ್ಲ; "ಮೊದಲ ಬಾರಿ ಹೊಡೆಸಿಕೊಂಡ ಏಟು ಹೇಗೆ ತಾನೇ ಮರೆಯಲು ಸಾಧ್ಯ? ಮತ್ತಲ್ಲದೇ ಅದೇ ಮೊದಲನೆಯದು ಮತ್ತು ಕೊನೆಯದೂ ಕೂಡ. ಅದೂ ಅಲ್ಲದೇ, ಕಾರಣವಿಲ್ಲದೇ ಏಟು ತಿಂದದ್ದು ಬೇರೆ! ಪೆಟ್ಟು ತಿನ್ನುವಂತಹ ಕೆಲಸ ಏನು ಮಾಡಿದ್ದೆ ನಾನು?", ಎಂಬ ಪ್ರಶ್ನೆಗಳು ಮನಸ್ಸಿನಲ್ಲಿ ಆಗಾಗ ಮೂಡುತ್ತಾ ಮರೆಯಾಗುತಿತ್ತು. 
            ಮನಸ್ಸು-ವಯಸ್ಸು ಬಲಿತ ಮೇಲೆ ಅಮ್ಮನನ್ನೇ ಪ್ರಶ್ನಿಸಿದ ಮಗ, "ಅಮ್ಮಾ, ಆ ದಿನ ನಿನಗೆ ನೆನಪಿದೆಯೇ? ನೀನು ನನಗೆ ಮೊದಲಬಾರಿ ಹೊಡೆದಿದ್ದು. ಯಾಕಮ್ಮಾ ಅವತ್ತು ನನಗೆ ಹೊಡೆದಿದ್ದು? ನಾನು ಆಟವಾಡುತ್ತಿದ್ದದ್ದು ತಪ್ಪಾಗಿತ್ತಾ?"
ಅಮ್ಮ ಹೇಳಿದಳು," ಇಲ್ಲಪ್ಪಾ ನಿನ್ನದು ತಪ್ಪು ಏನೂ ಇಲ್ಲಾ. ಆ ದಿನದ ಸಂದರ್ಭ ನನಗೆ ಹಾಗಿತ್ತು. ನಾವು ಇರುವುದೇ ಬೇರೆಯವರ ಮನೆಯಲ್ಲಿ. ಆ ಮನೆಯವರು ಆ ದಿನ ನಿನಗೆ ಬಯ್ಯುತ್ತಿದ್ದರು, ’ಇಡೀ ದಿನ ಆಟವಾಡುತ್ತಿರುತ್ತಾನೆ, ಒಂದು ಕಡ್ಡಿ ಕೆಲಸ ಮಾಡಲ್ಲಾ, ಸುಮ್ಮನೇ ಕೂಳುದಂಡ’ ಹೀಗೆ... ಅವರು ನಿನಗೆ ಆಡುತ್ತಿರುವ ಬೈಗುಳದ ನೋವನ್ನ ನನ್ನ ಹತ್ತಿರ ತಡೆಯಲಾಗಲಿಲ್ಲ. ಅದನ್ನ ಹೇಗಾದರೂ ತೀರಿಸಿಕೊಳ್ಳಬೇಕಾಗಿತ್ತಲ್ಲ, ಅದಕ್ಕೇ ನಿನಗೆ ಹೊಡೆದೆ. ನನ್ನ ನೋವನ್ನ ತೋರಿಸಿಕೊಳ್ಳಲು ನನಗಾದರೂ ಮತ್ಯಾರಿದ್ದರೋ?"
                                                                         ******
ಮಗ ಮತ್ತೂ ದೊಡ್ಡವನಾಗಿದ್ದ. 
          ಒಂದು ದಿನ ಜೇಬಿನೊಳಗಿರುವ ಹಣವಿದ್ದ ಪರ್ಸನ್ನ ಕಳೆದುಕೊಂಡು ಬಂದಿದ್ದ. ಮನೆಯಲ್ಲಿರುವ ಅಮ್ಮನಿಗೆ ಈ ವಿಷಯ ಹೇಳಿರಲೇ ಇಲ್ಲ.(ಅಮ್ಮ ಸುಮ್ಮನೇ ಬೇಜಾರು ಮಾಡಿಕೊಳ್ಳುತ್ತಾಳೆಂದೋ, ಸುಮ್ಮನೇ ಅವಳಿಗೆ ಕಿರಿ-ಕಿರಿ ಯಾಕೆಮಾಡುವುದೆಂದೋ ಇರಬೇಕು ಅಥವಾ ಬೈಯ್ಯುತ್ತಾಳೆಂದೂ ಇರಬೇಕು!!) ಆದರೆ ಮಗನ ಗುಟ್ಟು ಮನೆಯಲ್ಲಿ ರಟ್ಟಾಗದೇ? ಅಮ್ಮನಿಗೆ ಹೇಗೋ ವಿಷಯ ಗೊತ್ತಾಗಿಬಿಟ್ಟಿತು. ಬಂದು ವಿಚಾರಿಸಿದಳು, 
"ಪರ್ಸ್ ಇಲ್ವಲ್ಲಾ, ಎಲ್ಲಿ?"
ವಿಷಯಗೊತ್ತಾಗಿ ಬಿಟ್ಟಿದೆ, ಇನ್ನು ನಿಜ ಹೇಳಬೇಕಾದ್ದೇ!
"ಕಳೆದು ಹೋಗಿದೇಮ್ಮಾ..."
"ಹಯ್ಯೋ... ಎಷ್ಟು ಹಣವಿತ್ತೋ...?"
ಇದ್ದದ್ದೂ ಸಾವಿರವೇ ಆದರೂ ಮಗ ತಮಾಷೆ ಮಾಡಲೆಂಬಂತೆ ನಗುತ್ತಾ, "ಇತ್ತು; ಒಂದು-ಎರಡು ಲಕ್ಷ"
ಆದರೆ ಅಮ್ಮ ಸೀರಿಯಸ್ ಆಗೇ ಇದ್ದಳು, "ಎಲ್ಲಿ ಹೋಗಿತ್ತು ನಿಂಗೆ ಬುದ್ಧಿ? ಸರಿಯಾಗಿ ಇಟ್ಟುಕೊಳ್ಳುವುದರ ಬಿಟ್ಟು?"
"ಆದದ್ದಾಯಿತಲ್ಲ ಅಮ್ಮಾ, ಮತ್ಯಾಕೆ ಅದು?"
"ಆದರೂ ಇರುವಷ್ಟು ದಿನ ಸರಿಯಾಗಿ ಇಟ್ಟುಕೊಂಡಿರಬೇಕು ತಾನೇ?"
        ಮಗನಿಗೆ ಕೋಪ ಎಲ್ಲಿತ್ತೋ... ಅಲ್ಲಿಯೇ ಇದ್ದ ತರಕಾರಿ ಬುಟ್ಟಿಯನ್ನ ಎತ್ತಿ ಅಮ್ಮನ ತಲೆಯಮೇಲೆ ಇಡುತ್ತಾ, "ಸರಿ ಹಾಗಿದ್ದರೆ, ಹೊತ್ತುಕೊಂಡೇ ಇರು, ಇರುವಷ್ಟು ದಿನ ಇಟ್ಟುಕೊಳ್ಳಬೇಕಷ್ಟೇ!?" ಎಂದ.
          ಅಮ್ಮ ಕಣ್ಣೀರು ಸುರಿಸುತ್ತಾ, ದೇವರ ಹತ್ತಿರ ಹೋಗಿ, "ಆಹಾ... ಎಂತಹ ಮಗನ್ನ ಕೊಟ್ಟಿರುವೆಯಪ್ಪಾ!?"ಎಂದು ಬೇಡಿಕೊಳ್ಳುತ್ತಿರುವಾಗ, ಮಗ ತಾನು ಮಾಡಿದ ಅವಿವೇಕಿ ಕೆಲಸ ನೆನಪಾಗಿ ಏನು ಮಾಡಲೂ ತೋಚದೇ ಅಳುವುದೋ... ಅಥವಾ ಮಂಕು ಮುಖಮಾಡಿಕೊಂಡು ಸುಮ್ಮನೇ ಕುಳಿತುಕೊಳ್ಳುವುದೋ, ಏನೊಂದೂ ತೋಚದೇ... ಸುಮ್ಮನೇ ನಗೆಯಾಡಿ ಸಂದರ್ಭವನ್ನ ತಿಳಿಮಾಡಲು ಪ್ರಯತ್ನಿಸುತ್ತಿದ್ದ!
                                                                       
*****
           
              ಇಷ್ಟೆಲ್ಲಾ ಪೀಠಿಕೆಯನ್ನ ಹಾಕುತ್ತಾ ಈಗ ಪ್ರಮುಖ ವಿಷಯಕ್ಕೆ ಬರೋಣ. ಇದು ಸಾಲಾಗಿ; ಅನುಕ್ರಮದಲ್ಲಿ ನಡೆದ ಘಟನೆಗಳಲ್ಲ. ಆ ಆ ಸಂದರ್ಭದಲ್ಲಿ, ವಯಸ್ಸಿನಲ್ಲಿ ನಡೆದ ಘಟನೆಗಳಿವು. ನೆನಪೆಂಬ ಪುಸ್ತಕವನ್ನ ಬಿಡಿಸುತ್ತಾ, ಮಗುಚಿದ ಕೆಲವೇ-ಕೆಲವು ಹಾಳೆಗಳ ನಡುವಿನ ಕೆಲವು ಸಾಲುಗಳನ್ನ ಇಲ್ಲಿ ಮಾತ್ರಾ ಬರೆದಿದ್ದೇನೆ. ಇಲ್ಲಿ ಮಗನ ಪಾತ್ರ ನನ್ನದೇ! ಅಮ್ಮನ ಪಾತ್ರ!!? ಅದನ್ನ ಮತ್ತೆ ಹೇಳಬೇಕೆ? ನನ್ನ ಮುದ್ದು ಅಮ್ಮನದ್ದಲ್ಲದೇ ಮತ್ತೆಯಾರದ್ದು ತಾನೇ ಆಗಿರಲು ಸಾಧ್ಯ?
ಇವತ್ತು ಬೆಳಗ್ಗೆ ಎದ್ದಾಕ್ಷಣ, ಈ ದಿನ ಟೀಚರ್ಸ್ ಡೇ ಎನ್ನುವುದು ನೆನಪಿಗೆ ಬಂತು. ಆ ಸಂದರ್ಭದಲ್ಲಿಯೇ ನನ್ನ ಅಮ್ಮನೂ ನನ್ನ ಎದುರು ಹಾದು ಹೋದಳು. ಆ ಕ್ಷಣ ಅಮ್ಮನಿಗೇ ’ಟೀಚರ್ಸ್ ಡೇ’ ಯ ಶುಭಾಶಯ ತಿಳಿಸಿದೆ. ’ಇವತ್ತು ಟೀಚರ್ಸ್ ಡೇ, ಅಂತದ್ರಲ್ಲಿ ನನಗ್ಯಾಪಕ್ಕಾ ಶುಭಾಶಯ’ ಅಂತ ಕೇಳಿದ್ದಕ್ಕೆ, ನನ್ನ ಬಾಯಲ್ಲಿ ಬಂದ ವಾಕ್ಯ, "ಮನೆಯೇ ಮೊದಲ ಪಾಠಶಾಲೆ..." ಮುಂದುವರಿಸಿದ್ದು ಅಮ್ಮನೇ, ನಗುತ್ತಾ.... "ಜನನಿ ತಾನೇ ಮೊದಲ ’ಗುರು’...." ಎಂಬ ಮಾತನ್ನ!!
          ಪ್ರಕೃತಿಯೇ ನಮಗೆ ಅತೀ ದೊಡ್ಡಗುರು ಎಂದು ಅರಿತವರು ಬಲ್ಲರು. ದೇವನು ಪ್ರತಿಯೊಬ್ಬ ವ್ಯಕ್ತಿಗೂ ತಾನೇ ಎದುರು ನಿಂತು ಕಲಿಸಲು ಸಾಧ್ಯವಿಲ್ಲ ಎನ್ನುವ ಕಾರಣಕ್ಕಾಗಿ, ಆ ಆ ಸಮಯದಲ್ಲಿ ಆತನು ಕಲಿಯ ಬೇಕಾದ ಜೀವನದ ಯಶಸ್ಸಿನ ಪಾಠಗಳನ್ನ ಅತೀ ಸೂಕ್ಷ್ಮವಾಗಿ ಪ್ರಕೃತಿಯಲ್ಲಿ ಅಡಗಿಸಿಟ್ಟು, ಆಯಾ ಸಂದರ್ಭದಲ್ಲಿ ಅದು ಹೊರಬರುವಂತೆ ಮಾಡುತ್ತಿರುತ್ತಾನೆ. ಅದನ್ನ ನಾವು ಅರ್ಥೈಸಿಕೊಳ್ಳಬೇಕಷ್ಟೇ. ಹೀಗೆ  ಅನೇಕ ಗುರುಗಳ ಮೂಲಕ ಸುಂದರ ಜೀವನವನ್ನ ಕಟ್ಟಿಕೊಳ್ಳಲು ಪ್ರಯತ್ನಿಸುತ್ತಿರುವ ನನಗೆ ಅನೇಕ ಗುರುಗಳ ಸಮೂಹದಲ್ಲಿ ಮೊದಲ ಗುರುವಾಗಿ-ನನ್ನೊಟ್ಟಿಗೇ ಇರುವವಳು ನನ್ನ ಅಮ್ಮನೇ! ಅದಕ್ಕೇ ಮೊದಲ ಗುರುವಂದನೆ ನನ್ನ ಅಮ್ಮನಿಗೇ.
            ಮಕ್ಕಳು ದೊಡ್ಡವರಾದಂತೆ ಹೆತ್ತವರಿಗೆ ಅವರು ದೂರವಾಗುತ್ತಲೇ ಸಾಗುವ ಜಾಯಮಾನ ಈಗಿನ ಮಕ್ಕಳದು. ಮಾತು ಮಾತಿಗೆ, "ಅಪ್ಪಾ-ಅಮ್ಮಾ... ನನಗೆ ನೀವು ಏನು ಮಾಡಿದ್ದೀರಿ?" ಎನ್ನುವ ಪ್ರಶ್ನೆಯನ್ನ ಎದುರು ಮಂಡಿಸುತ್ತಾ ಅವರನ್ನ ನೋವಿಸುವುದೇ ಪರಿಪಾಠವಾಗಿದೆ. ’ಹೆತ್ತವರಿಗೆ ಹೆಗ್ಗಣವಾದರೂ ಮುದ್ದು’ ಎಂಬ ಮಾತು ಈಗ ಬದಲಾಗಿದ್ದು, ’ಹೆತ್ತವರಿಗೆ ಹೆಗ್ಗಣದ ಮದ್ದೇ’ ಎಂದರೆ ಅತಿಶಯೋಕ್ತಿಯಲ್ಲವೇನೋ!!
           ಹಿರಿಯರಾದ, ನನ್ನ ಗುರುಗಳೂ ಆದ, ಅಧ್ಯಾಪಕಾರಾಗಿಯೂ ಸೇವೆ ಸಲ್ಲಿಸುತ್ತಿರುವ ಶರ್ಮಕಾಕಾ ಹೇಳಿದ, ಹೆತ್ತವರ-ಮಕ್ಕಳ ಸಂಬಂಧದ ಬಗೆಗಿನ ಒಂದು ಘಟನೆ ಈ ಸಂದರ್ಭದಲ್ಲಿ ನೆನಪಾಗುತ್ತಿದೆ. 
        ಒಂದು ದಿನ, ಅವರ ಶಾಲೆಯಲ್ಲಿಯೇ ಓದುತಿದ್ದ ಹುಡುಗನೊಬ್ಬನ ತಂದೆತಾಯಿಗಳು ಇವರ ಬಳಿ ಬಂದು, ನಿಮ್ಮ ಶಾಲೆಯಲ್ಲಿ ಹಾಕಿಕೊಳ್ಳಲು ಸೂಚಿಸಿದ ಬೂಟಿನ ದರ ಬಲು ಹೆಚ್ಚಾದ್ದರಿಂದ, ಅದೇ ತರಹದ, ಇನ್ನೊಂದು ಕಂಪೆನಿಯ, ನಮ್ಮ ಅನುಕೂಲಕ್ಕೆ ತಕ್ಕ ಬೆಲೆಯ ಬೂಟನ್ನ ತರಿಸಿಕೊಟ್ಟರೆ; ನನ್ನ ಮಗ, "ನನಗೆ ಇದು ಬೇಡ, ಅದೇ ಬೇಕು!" ಎಂದು ಹಠ ಹಿಡಿದಾಗ. "ನಮ್ಮ ಹತ್ತಿರ ಅದನ್ನ ಕೊಡಿಸುವಷ್ಟು ಸಾಮರ್ಥ್ಯವಿಲ್ಲಪ್ಪ " ಎಂದು ದಯನೀಯವಾಗಿ ಹೇಳಿದಾಗ, ಮಗ ಹೇಳಿದ ಮಾತು ಕೇಳಿ, ಇವರಿಬ್ಬರೂ ದಂಗಾಗಿ ಕುಳಿತಿದ್ದುಬಿಟ್ಟರಂತೆ! ಅವನಾಡಿದ ಮಾತು, "ನನಗೆ ಬೂಟು ತಂದು ಕೊಡುವ ಸಾಮರ್ಥ್ಯ ನಿಮಗಿಲ್ಲಾ ಎಂದಾದರೆ, ನನ್ನನ್ನೇನು ನಿಮಗೆ ನಿದ್ದೆ ಬಂದಿಲ್ಲ ಎಂದು ಹುಟ್ಟಿಸಿದ್ದೋ?" ಎಂದು. "ಯಾವ ತಂದೆ-ತಾಯಿಗೆ ತಮ್ಮ ಮಗನಿಂದಲೇ ಇಂತಹ ಮಾತನ್ನ ಕೇಳುವುದಕ್ಕೆ ಸಾಧ್ಯ ಸಾರ್?" ಎನ್ನುತ್ತಾ ತಮ್ಮ ನೋವನ್ನ ತೋಡಿಕೊಂಡರಂತೆ. ಮತ್ತೂ ವಿಶೇಷದ ವಿಷಯವೇನಂದರೆ ಈ ಮಾತನಾಡಿದ್ದು ಕಾಲೇಜ್ ಹುಡುಗನಲ್ಲ. ಪ್ರೈಮರಿಯಲ್ಲಿ ಓದುತ್ತಿರುವ ಅತಿ ಚಿಕ್ಕ ವಯಸ್ಸಿನಲ್ಲಿಯೇ ಆಡಿದ ಮಾತು ಇದು!  
           ಈಗಿನ ಅತೀ ನೋವು ಕೊಡುವಂತಹ ವಾಸ್ತವ ಪರಿಸ್ಥಿತಿ ಇದು. ಆ ಹುಡುಗನ ಈ ಅತೀ-ಬುದ್ಧಿವಂತಿಕೆಗೆ ಯಾರನ್ನ ಹೊಣೆಯಾಗಿಸುವುದು? ಮಕ್ಕಳ ಉದ್ಧರಿಸುವ ಕಾರಣಗಳನ್ನ ಕೊಡುತ್ತಾ, ಈಗಿನ ಪೈಪೋಟಿತನವನ್ನೇ ಬಂಡವಾಳವಾಗಿರಿಸಿಕೊಂಡು ಹಗಲು ದರೋಡೆಗಿಳಿದಿರುವ ವಿದ್ಯಾದೇಗುಲಗಳನ್ನೋ? "ನಮಗೇನು ಇಲ್ಲಿ ಗಿಂಬಳಸಿಗುತ್ತೋ"ಎಂದು ಆಲೋಚಿಸುತ್ತಾ, ಸಂಬಳಕ್ಕೆ ತಕ್ಕಷ್ಟೇ ವಿದ್ಯೆಯನ್ನ ಕಲಿಸುವ ಗುರುವನ್ನೋ? ಸಲ್ಲದ ವಿಷಯವನ್ನ ಅತೀ ರಂಜಕವಾಗಿ ತೋರಿಸಿ ಮುಗ್ಧಮನಸ್ಸಿನೊಡನೆ ಆಟವಾಡುವ ಸಮಾಜದ ಮಾಧ್ಯಮಗಳನ್ನೋ? ಮುದ್ದು ಮನಸ್ಸಿನ, ಯಾವುದು ಕೆಟ್ಟದ್ದು, ಒಳ್ಳೇಯದು ಎಂದು ಗುರುತಿಸಲು ಸಾಧ್ಯವಾಗದೇ; ಕೆಟ್ಟದ್ದನ್ನೇ ಒಳ್ಳೆಯದೆಂದು ಭಾವಿಸಿ, ಅದನ್ನೇ ತಮ್ಮದಾಗಿಸಿಕೊಳ್ಳುವ ಮಕ್ಕಳನ್ನೋ? ಅಥವಾ ಮಕ್ಕಳು ಕೇಳಿ-ಕೇಳಿದ್ದನ್ನೆಲ್ಲಾ ಕೊಡಿಸಲು ಸಾಧ್ಯವಾಗದೇ, ಮಕ್ಕಳು ಹೇಳುವ ಕಠೋರ ನುಡಿಗಳನ್ನೆಲ್ಲಾ ಕೇಳುತ್ತಾ ಕೈ-ಚೆಲ್ಲಿ ಕುಳಿತುಕೊಳ್ಳುವ ಪಾಲಕರನ್ನೋ? ಇಲ್ಲಿ ಹೊಣೆಗಾರಿಕೆಯನ್ನ ತಮ್ಮಮೇಲೆ ಹಾಕಿಕೊಂಡು, ತಪ್ಪನ್ನ ತಿದ್ದಿಕೊಳ್ಳುವ-ತಿದ್ದುವ ಕೆಲಸವನ್ನ ಮಾಡುವವರೂ ಅತೀ ವಿರಳರೇ!
          ಏನೇ ಆಗಲಿ, ನನ್ನ ಅಮ್ಮ ಮಾತ್ರಾ ತನ್ನ ಜವಾಬ್ಧಾರಿಯನ್ನ ನನಗೆ ಚಾಚೂ ತಪ್ಪದೇ ಮಾಡಿಮುಗಿಸಿದ್ದಾಳೆ. ಮುದ್ದು ಮಾಡುವಲ್ಲಿ ಮುದ್ದುಮಾಡಿ, ಕಠೋರದ ಸಮಯದಲ್ಲಿ, ಹಟದಿಂದಲೇ ನನ್ನನ್ನ ಸರಿದಾರಿಯಲ್ಲಿ ನಡೆಸಿ-ಬೆಳೆಸಿದ್ದಾಳೆ. ಅಮ್ಮ ನನಗೆ ಏನೇನೋ ಕೊಡಿಸಿದ್ದಿಲ್ಲ! ಬದಲು ಬದುಕುವ ಪಾಠವನ್ನ ಪರಿ-ಪರಿಯಾಗಿ ಕೈ ಹಿಡಿದು ಕಲಿಸಿ, ನಡೆಸಿದ್ದಾಳೆ. ತನಗಿಲ್ಲದಿದ್ದರೂ, ತನಗೆಂದು ಕೊಟ್ಟಿದ್ದನ್ನ ಮಗನಿಗೆಂದು ತೆಗೆದಿರಿಸಿ ನನ್ನ ದಿನಗಳ ಹಸಿವನ್ನ ಇಂಗಿಸಿದ್ದಾಳೆ. ಸಮಯದಲ್ಲಿ ತಿಳಿಹೇಳಿ ನೋವನ್ನ ಮರೆಸಿದ್ದಾಳೆ. ಕಷ್ಟವನ್ನ ಸಹಿಸುವುದನ್ನು ಕಲಿಸಿದ್ದಾಳೆ. ಸಂಬಂಧಗಳನ್ನ ಪ್ರೀತಿಸುವುದನ್ನ-ಗೌರವಿಸುವುದನ್ನ ನನಗೇ ಧಾರೆಯೆರೆದಿದ್ದಾಳೆ. ನನ್ನ ಸುಖೀ ಜೀವನಕ್ಕೆ ತಕ್ಕ ವಾತಾವರಣವನ್ನ ಕಲ್ಪಿಸಿಕೊಟ್ಟಿದ್ದಾಳೆ. ನನಗೆ ಮತ್ತೇನು ತಾನೇ ಬೇಕು?
          ಆದರೆ, "ಅದೇ ಮಗ ಇಂದು ದೊಡ್ಡವನಾಗಿದ್ದಾನೆ! ಅದೇ ಅಮ್ಮನ ಪ್ರೀತಿ ಇಂದು ಅತೀ ಅನ್ನಿಸುತ್ತಿದೆ!! ನನಗೆ ಎಲ್ಲವೂ ತಿಳಿದಿದೆ ಎನ್ನುವ ಅಹಂ ಅವನ ಮನಸ್ಸಿನಲ್ಲಿ ಮನೆಮಾಡಿ, ಮತ್ತೆ-ಮತ್ತೆ ಅವಳಿಗೆ ಕಠೋರ ಮಾತುಗಳನ್ನಾಡಿ ನೋವಿಸುತ್ತಿರುತ್ತಾನೆ! ಅಮ್ಮಾ... ನಿನ್ನ ಮಗ ಹೇಗೆಂಬುದು ನಿನಗೇ ಗೊತ್ತಲ್ಲಾ... ಹಾಗೇ ಮಾಡಿದ್ದಾಗಲೆಲ್ಲಾ ಕ್ಷಮಿಸಿಬಿಡಮ್ಮಾ... ನೀನೇ ತಾನೇ ನನ್ನ ಮೊದಲ ಗುರು. ಗುರುವಾದವನು ತನ್ನ ಶಿಷ್ಯನ ತಪ್ಪುಗಳನ್ನೆಲ್ಲಾ ತಿದ್ದಿ-ತೀಡಿ ಸನ್ಮಾರ್ಗದಲ್ಲಿ ನಡೆಸುತ್ತಾನೆ. ಅದರಲ್ಲೂ ನೀನೇ ನನಗೆ; ಅಮ್ಮನೊಟ್ಟಿಗೆ-ಗುರುವಾಗಿಯೂ ನನ್ನನ್ನ ನಡೆಸುತ್ತಿದ್ದೀ. ನಿನಗೆ ಎಷ್ಟು ಧನ್ಯವಾದಗಳನ್ನ ಅರ್ಪಿಸಲೋ ನಾನರಿಯಲಾರೆ. ಮತ್ತೊಮ್ಮೆ ನಿನಗೇ ನಾನು ಮೊದಲು... ಶಿಕ್ಷಕರ ದಿನಾಚರಣೆಗೆ ಶುಭಾಶಯವನ್ನ ಹೇಳುತ್ತಿದ್ದೇನೆ.
"ಹ್ಯಾಪೀ ಟೀಚರ್ಸ್ ಡೇ... ಅಮ್ಮಾ..."
          ನನ್ನ ಈಗಿನ ಉತ್ತಮ ಪರಿಸ್ಥಿತಿಗೆ ಕಾರಣೀ ಭೂತರಾಗಿರುವ- ಆಗುತ್ತಲೂ ಇರುವ ಎಲ್ಲಾ ಗುರುವಿನ ಸಮೂಹಕ್ಕೆ ಶಿಕ್ಷಕರ ದಿನಾಚರಣೆಯ ಶುಭಾಶಯವನ್ನ ತಿಳಿಸುತ್ತಿರುವೆ.


ನನ್ನ ಅಮ್ಮ.


ಸೋಮವಾರ, ಜುಲೈ 9, 2012

ಕಥೆ:ಹರೀಶನ ಪ್ರೇಮ ಪ್ರಸಂಗ


ನೀನು ಫೇಕ್…”
ನಾನು ಫೇಕ್ ಅಲ್ಲಾ..!
ಹೌದು... ನೀನು ಫೇಕೇ..!!
ನಾನು ಫೇಕ್ ಅಲ್ಲಾ... ಅಲ್ಲಾ...
"ನೀನು ಫೇಕ್ ಅಲ್ಲಾ ಅನ್ನಲಿಕ್ಕೆ ಸಾಕ್ಷಿ ಏನಿದೆ??”
ನಿನಗೆ ಸಾಕ್ಷಿ.... ಬೇಕಾ? ... ಸಾಕ್ಷಿ??” ಎನ್ನುತ್ತಲೇ ಆಕಾರವು, ಹಲ್ಲುಕಿರಿದು, ಕೋರೆ ದಾಡೆಗಳನ್ನೊಮ್ಮೆ ಝಳಪಿಸಿ, ತನ್ನ ನಾಲಿಗೆಯನ್ನು ಹೊರಚಾಚಿ, ಒರಟು ಒಣದುಟಿಯ ಮೇಲೆ ಚಪ್ಪರಿಸಿ, ಒಮ್ಮಿಂದೊಮ್ಮೆಲೇ ತನ್ನ ಕಡೆಗೆ ಹಾರಿದ್ದು ನೋಡಿ, ಹೌಹಾರಿದ ಹರೀಶ!!
  ಠಕ್ಕಂತ ಎದ್ದು ಕುಳಿತ.
ಒಂದು ಕ್ಷಣದ ಕಾಲ ತಾನು ಎಲ್ಲಿರುವನೆಂದೇ ಅವನಿಗೆ ತಿಳಿಯಲಿಲ್ಲ. ಮೈಯೆಲ್ಲಾ ಬೆವರಿನಿಂದ ತೋಯ್ದಿತ್ತು. ತಾನು ಎಲ್ಲಿಗೋ ಓಡಲು ಪ್ರಯತ್ನಿಸಿರುವುದೂ, ಕೈ-ಕಾಲುಗಳು ತುಸು ನಡುಗುತ್ತಿರುವುದೂ- ಅವನ ಅನುಭವಕ್ಕೆ ಬಾರದೇ ಇರಲಿಲ್ಲ!
ಒಂದೆರಡು ನಿಮಿಷ ತನ್ನ ತಾನು ಸಮಾಧಾನ ಮಾಡಿಕೊಂಡು ವಾಸ್ತವಕ್ಕೆ ಬರಲು ಪ್ರಯತ್ನಿಸಿ,
   ಆಗ ತಾನೇ ಕಂಡ ಆಕಾರ ಈಗೆಲ್ಲಿ ಹೋಯಿತು?’ ಎಂದುಕೊಳ್ಳುತ್ತಲೊಮ್ಮೆ ಸುತ್ತಲೂ ನೋಡಿ, ಎಲ್ಲಿಯೂ ಕಾಣದಿರುವುದನ್ನ ನೋಡಿ, ನಿಟ್ಟುಸಿರೊಂದ ಬಿಟ್ಟು, ಮತ್ತೆ ತನ್ನ ಹಾಸಿಗೆಯ ಮೇಲೆ ಮೈಚಾಚಿ ಮಲಗಿದ.
ಮತ್ತೆ ಕಣ್ಣುಮುಚ್ಚಲು ಪ್ರಯತ್ನಿಸಿದರೆ, ಆ ಆಕಾರವೇ ಧುತ್ತೆಂದು... ಎದುರಿಗೆ ಬಂದದ್ದನ್ನ ನೋಡಿ, ಕಣ್ಣನ್ನ ಹಾಗೆಯೇ ಬಿಟ್ಟು ಅದರ ಬಗ್ಗೆಯೇ ಚಿಂತಿಸತೊಡಗಿದ.
ಈಗ ಕಂಡಿದ್ದು ವಾಸ್ತವವೇ? ಅಥವಾ ವಾಸ್ತವದಂತಿರುವ ಕನಸೇ? ಹೀಗೆ ಕಾಣಲಿಕ್ಕಾದರೂ ಕಾರಣ ಏನಿರಬಹುದು? ಅಂತಹ ಆಕಾರವನ್ನ ನಾನೆಂದೂ ನೋಡಿದ್ದಿಲ್ಲ! ಯೋಚಿಸಿದ್ದಿಲ್ಲ! ಭಯಂಕರ ಛಾಯಾರೂಪದಲ್ಲಿ ತನ್ನೆದುರಿಗೆ ನಿಂತು ವಾದಮಾಡಿ, ಕೊನೆಗೊಮ್ಮೆ ತನ್ನನ್ನೇ ಆಕ್ರಮಿಸ ಹೊರಟ ಅದನ್ನ ನೆನಸಿಕೊಂಡರೆನೇಯೇ ಮೈಮೇಲೆ ಹಾವು ಹರಿವ ಅನುಭವ ಆಗುತ್ತೆ!! ಅದು ಈ ರೀತಿಯಾಗಿ ಕಾಣಲಿಕ್ಕೆ ಕಾರಣವೇನಿರಬಹುದು??” ಎಂದುಕೊಳ್ಳುತ್ತಲೇ ತಾನು ಅಡ್ಮಿನ್ ಆಗಿ ನಿರ್ವಹಿಸುತ್ತಿರುವ ಫೇಸ್ ಬುಕ್ನ ಒಂದು ಗ್ರುಪ್ ನಲ್ಲಿ ಹುಡುಗಿಯರದೇ ಎಂದು ಭಾಸವಾಗುವ- ಫೇಕ್ಪ್ರೊಫೈಲ್ ಗಳ ಹಾವಳಿಯನ್ನ ನಿಯತ್ರಿಸಲು ಹಾಗೇ ಅನುಮಾನ ಬಂದವರನ್ನೆಲ್ಲಾ ವಿಚಾರಿಸುವುದ ನೆನಪಾಗಿ,
"ಬಹುಶಃ ಹೀಗೂ ಆಗಿದ್ದಾಗಿರಬೇಕು- ತಾನು ಕಂಡುಹಿಡಿದ ಫೇಕ್ ಪ್ರೊಫೈಲ್ ಮಂದಿಯೆಲ್ಲಾ ತಮ್ಮ, ತಮ್ಮ ಕಮರಿಹೋದ ಕನಸುಗಳ ಸೇಡು ತೀರಿಸಿಕೊಳ್ಳಲು, ತನ್ನ ಮೇಲೆ ಕತ್ತಿಮಸೆಯ ಇಂತಹ ಆಕಾರವನ್ನ ಸೃಷ್ಟಿಸಿ ಕಳುಹಿಸಿರಬಹುದೇ? ಅಥವಾ ಅಂತಹ ಫೇಕ್ ಅಂತೇ ತೋರುವಲ್ಲಿಯೂ ಸರಿಯಾದದ್ದೂ ಇದ್ದು... ಅವರೆಲ್ಲರ ನಿರಾಸೆಯ ಆತ್ಮ ಬುಸುಗುಟ್ಟಿ, ತನ್ನಮೇಲೇರಿ ಬಂದಿರಬಹುದೇ??”
ಎನ್ನುವ ನೂರಾರು ಚಿಂತೆಗಳು ಅವನ ಮೇಲೆ ಒಂದರ ಮೇಲೊಂದು ಸವಾರಿಯನ್ನ ಮಾಡುತ್ತಿದ್ದಂತೆ ಅಲರಾಮ್ ಕಿರ್ರ್.....ಎಂದು ಕೂಗತೊಡಗಿದ್ದನ್ನ ಮತ್ತೆ ಅವನನ್ನ ಬೆಚ್ಚಿಬೀಳಿಸಿತು!
ಆ ಭಯಂಕರ ಆಕೃತಿ ಅಲರಾಮ್ ನಲ್ಲೆಂದು ಸೇರಿಕೊಂಡಿತಪ್ಪಾ?’ ಎಂದುಕೊಳ್ಳುತ್ತಾ. ಅದನ್ನ ನೋಡಿದಾಗ ಅಲ್ಲಿ ೫.೧೫ ಆಗಿರುವುದನ್ನ ನೋಡಿ, ಈದಿನ ಸ್ನೇಹಿತರೊಂದಿಗೆ ಹೋಗಬೇಕಿದ್ದ ಸೋಮನಾಥಪುರ ಟ್ರಿಪ್ಪಿಗೆ, ಹೋಗಲನುಗುಣವಾಗುವಂತೆ ಬೇಗನೆ ಏಳಲು ಸೆಟ್ ಮಾಡಿಟ್ಟುಕೊಂಡಿದ್ದು ನೆನಪಾಗಿ ಎದ್ದು ಕುಳಿತು, ಲಗುಬಗೆಯಿಂದ ಅದನ್ನ ಆಫ್ ಮಾಡಿ ಬಾತ್ರೂಂ ಕಡೆ ಹೆಜ್ಜೆ ಹಾಕಿದ.
ಷವರ್ ತಿರುಗಿಸಿ ಅದರ ಕೆಳನಿಂತ ತಕ್ಷಣ, ತಂಪಾದ ನೀರು ತಲೆಯ ಮೇಲೆ ಬಿದ್ದು ಕೆಳಹರಿಯುತ್ತಿದ್ದಂತೆ ದೇಹಕ್ಕೂ, ಮನಸ್ಸಿಗೂ ಹಾಯ್ ಎನಿಸಿತ್ತು ಅವನಿಗೆ.
ಎಲ್ಲಾ ಮರೆತು ಆ ಸಮಯವ ಉಲ್ಲಾಸದಿಂದಲೇ ಅನುಭವಿಸಿ- ಗಂಗೆಯಲ್ಲಿ ಮುಳುಗಿ ಸಕಲ ಪಾಪವ ಪರಿಹರಿಸಿಕೊಳ್ಳುವಂತೆ; ಹರೀಶ ಷವರ್ ನ ಕೆಳನಿಂತು ಭಯಂಕರಾಕೃತಿಯ ಭಾರದಿಂದ ಮುಕ್ತನಾಗಿ, ಫ್ರೆಶ್ ಆಗಿ ಹೊರಬಂದು, ಬೇಗ ಬೇಗನೆ ರೆಡಿಯಾಗಿ ಬೈಕ್ ಚಾಲೂ ಮಾಡಿ, ತನ್ನ ಪಿಕ್-ಅಪ್ ಪೈಂಟ್ ಗಿರಿನಗರದ ಕಡೆ ಮುಖಮಾಡಿದ.
                                                     **********
ಗಾಡಿ ಬಂದು ಗಿರಿನಗರದ ರಾಧಾಕೃಷ್ಣ ಹಾಸ್ಪಿಟಲ್ ನ ಎದುರಾಗಿ ಅವನಿಗೆ ಕಾಯುತಿತ್ತು. ಸ್ನೇಹಿತರೊಡಗೂಡಿ ಗಾಡಿ ಏರಿದ್ದೂ ಆಯಿತು.
ಒಬ್ಬರಿಗೊಬ್ಬರ ಉಭಯಕುಶಲೋಪರಿಯಲ್ಲಿ ಹರಿ ಖುಷಿ-ಖುಷಿಯಿಂದಲೇ ಭಾಗವಹಿಸಿದ.
ಗಾಡಿಯ ತುಂಬೆಲ್ಲಾ ಕೆಲವೇ ಸಮಯದಲ್ಲಿ ಖುಷಿಯ ಖೇಕೆಗಳೂ ತುಂಬಿದವು. ಅವನ ನಗುಮೊಗ ಎಲ್ಲರನ್ನೂ ವಿಶೇಷವಾಗಿ ಉತ್ಸಾಹಿಸುವಂತಿತ್ತು.
ಒಬ್ಬರನ್ನೊಬ್ಬರ ಕಾಲೆಳೆದುಕೊಳ್ಳುವುದೂ, ಚುಡಾಯಿಸುವುದೂ, ಜೋಕ್ ಕಟ್ ಮಾಡಿ ನಗುವುದೂ ಗಾಡಿಯನ್ನ ಬೇಗನೇ ಬೆಂಗಳೂರನ್ನು ದಾಟಿಸಿತು.
ರಸ್ತೆಯಂಚಿನ ಹೋಟೆಲ್ ನಲ್ಲಿ ಹಸಿವಿನಿಂದ ಚುರ್ ಗುಟ್ಟುತ್ತಿರುವ ಹೊಟ್ಟೆಗೆ ಉಪಹಾರದ ಸೇವನೇಯೂ ಸಾಂಗವಾಗಿ ನಡೆದು, ಎಲ್ಲರನ್ನೂ ಮತ್ತೂ ಉತ್ಸಾಹಿತರನ್ನಾಗಿ ಮಾಡಿತು.
ಈಗ ಎಲ್ಲರ ಕಣ್ಣೂ, ಕಿವಿಗಳೆಲ್ಲವೂ ಉತ್ಸಾಹದಿಂದ, ಹಿರಿತಲೆ ಪೂರ್ಣಿಮಾಳಲ್ಲಿ ತುಂಬಿಕೊಳ್ಳುವಂತೆ ಮಾಡಿದ್ದು- ಅವಳು ಹೇಳಿದ ತನ್ನ ಪ್ರೇಮ-ಮದುವೆ ಕಥೆಯಿಂದ!!
ಇದು ಹರೀಶನಿಗೆ ತುಂಬಾನೇ ಎಕ್ಸೈಟಿಂಗ್ ವಿಷಯವಾಗಿತ್ತೋ, ಏನೋ? ಬಿಟ್ಟಕಣ್ಣು ಬಿಟ್ಟಹಾಗೇ, ತೆರೆದ ಬಾಯ ಮುಚ್ಚದೇ ಕೇಳಿದ್ದು ಸುಳ್ಳಲ್ಲ!
ಪೂರ್ಣಿಮಾ ಹೇಳುತ್ತಿದ್ದಳು, “ಅವರನ್ನ ನಾ ಯಾವ ಕ್ಷಣದಲ್ಲಿ ನೋಡಿದೆನೋ ಅಂದೇ ಮನಸ್ಸಿನಲ್ಲಿಯೇ ನನ್ನ ಆರಾಧ್ಯ ದೈವರಾಗಿ ಬಿಟ್ಟರು. ಇವರು ನನ್ನವರೇ ಎಂದು ಮನಸ್ಸಿನಲ್ಲಿ ಅನ್ನಿಸಿಬಿಟ್ಟಿತು. ಅವರಿಗೂ ಹಾಗೆಯೇ ಅನ್ನಿಸಿದ್ದು ನನ್ನ ಭಾಗ್ಯಕ್ಕೆ ಎಡೆಯಿಲ್ಲದಂತಾಯಿತು. ಇನ್ನೇನು ತಡ! ತನ್ನ ಮನೆಯವರ ಪುಟ್ಟ ವಿರೋಧದಲ್ಲಿಯೇ ಮದುವೆಯೂ ಆಗಿಹೋಯಿತು. ಈಗ ನನಗೆ ಎರಡು ಮಕ್ಕಳು!!ಎಂದು ನಗುಮೊಗದಲ್ಲೇ ಹೇಳಿದ್ದು ಅವಳು ಎಷ್ಟು ಸಂತೋಷದಿಂದ ಇರುವಳು ಎನ್ನುವುದು ತೋರುತಿತ್ತು.
ಇದು ಹರಿಗೆ ಆಶ್ಚರ್ಯತರುವಂತ ವಿಚಾರವಾಗಿತ್ತು. ಪ್ರೇಮದ ಬಗ್ಗೆ ಓದಿ, ಉಳಿದವರು ಹೇಳಿದ್ದ ಕೇಳಿದ್ದಷ್ಟೇ ತಿಳಿದಿತ್ತು! ಆದರೆ ಅವುಗಳಲ್ಲೆಲ್ಲಾ ಪ್ಯಾಂಟಸಿಗಳೇ ಹೆಚ್ಚಿದ್ದರಿಂದ ಅವನನ್ನ ಅದರ ಬಗ್ಗೆ ಅಷ್ಟೇನೂ ಉತ್ಸಾಹಿಸುವಂತೆ ಮಾಡಿರಲಿಲ್ಲ! ಆದರೆ ಇಷ್ಟು ಹತ್ತಿರದಿಂದ ಕೇಳಿದ ಈ ಕಥೆ, ಅವನ ಮನದಲ್ಲಿ ಗೂಡುಕಟ್ಟ ತೊಡಗಿತು!!
  ನೋಡಿದ ತಕ್ಷಣವೇ ಲವ್ವೇ?? ಇದು ಹೇಗೆ ಸಾಧ್ಯ?
ನನ್ನ ಪರಿಧಿಯಲ್ಲೇ ಕೇಳಿದ ಅತಿಸೊಗಸಾದ ಕಥೆ ಇದು. ಅಲ್ಲದೇ ವಾಸ್ತವವೂ ಹೌದು, ಕಲ್ಪನೆಯಂತೂ ಅಲ್ಲವೇ ಅಲ್ಲಾ! ಮತ್ತಲ್ಲದೇ; ಸಾಕ್ಷಿಗೆ ನಗುಮೊಗದ ಈ ಅಕ್ಕನೇ ಇದ್ದಾಳೆ!!
ಆದರೂ....
ನಾನು ಇಷ್ಟರವರೆಗೆ ಎಷ್ಟು ಹುಡುಗಿಯರನ್ನ ನೋಡಿಲ್ಲ! ಯಾರ ಮೇಲೂ ಅಂತ ಭಾವನೆಯೇ ಹುಟ್ಟಿಲ್ಲವಲ್ಲ!
ಇವಳು ಹೇಳುತ್ತಿರುವುದ ನೋಡುತ್ತಿರೆ, ಪ್ರೇಮದಲ್ಲಿ ಅಂತ ಸೊಗಸಿದೆಯಂತಾಯಿತು! ಅಂತ ಸೊಗಸು ನನಗ್ಯಾಕೆ ಸೋಗು ಹಾಕಿ ಕುಳಿತಿದೆ?
ಅಂತ ನಯ-ನಾಜೂಕು ಅವರಲ್ಲಿ ಕಾಣಲು ಯಾಕೆ ನನ್ನ ಮನ ಮಾಯವಾಗಿದೆ?
ಅವರ ಮಾಟವ ನೋಡುವುದ ಬಿಟ್ಟು! ನನ್ನ ಬುದ್ಧಿಯಾಕೆ ಮಾಟ-ಮಂತ್ರಿಸಿದಂತೆ ಭ್ರಮಾನಿರಸನವಾಗಿದೆ?
ಅವರಲ್ಲಿರುವ ಯಾವ ಸೌಂದರ್ಯದ ಸೊಭಗೂ ನನ್ನ ಚಿತ್ತವನ್ನ ಚಿತ್ತು ಮಾಡುವುದರಲ್ಲಿ ಯಾಕೆ ಸೋತುಹೋಗಿದೆ? ಅಲ್ಲದೇ, ಪ್ರೇಮಿಸುವ ವಯಸ್ಸೂ ನನ್ನದಲ್ಲವೇ!?
ಪ್ರೇಮ ಹುಟ್ಟಲು ವಯಸ್ಸಿನ ಅಗತ್ಯವೇ ಇಲ್ಲವೆಂದು ಎಲ್ಲೋ ಓದಿದ ನೆನಪಿದೆ! ಆದರೂ..ಯಾವ ಕಾರಣಕ್ಕೆ ಸನ್ಯಾಸಿಯ ಪೇಟ ನನ್ನ ತಲೆಮೇಲೆ ಬಂದು ಕುಳಿತಿರಹಬುದು?
ನನ್ನ ಕಣ್ಣಿನ ಕನ್ನಡಕವೇನಾದರೂ ಅಂತಹ ಸೂಕ್ಷ್ಮ ಸಂವೇದನೆಯನ್ನುಂಟು ಮಾಡಿ, ನನ್ನ ಕಣ್ಣಿನವರೆಗೆ ಪ್ರೇಮದ ಭಾವನೆಯನ್ನು ತರಲು ಸೋಲುತ್ತಿದಿಯೇ??” ಎಂದುಕೊಳ್ಳುತ್ತ ಕನ್ನಡಕವನ್ನೊಮ್ಮೆ ತೆಗೆದು, ಒರೆಸಿ-ಧರಿಸಿದ.
ಇಲ್ಲಾ ಇಲ್ಲಾ... ಅದಾಗಿರಲು ಸಾಧ್ಯವಿಲ್ಲ!! ಆ ಆ ವಯಸ್ಸಿಗನುಗುಣವಾಗಿಯೇ ಪದೇ ಪದೇ ಚೆಕ್ ಮಾಡಿಸುತ್ತ, ದರ್ಪಣವ ಬದಲಿಸುತ್ತಲೇ ಇರುವೆ!!
   ಬಹುಶಃ ಈ ಒಂದು ಕಾರಣಕ್ಕಿರಬಹುದು.......
 ಹುಡುಗಿಯರ ಹೆಸರಿನ ಫೇಕ್ ಪ್ರೋಫೈಲ್  ನೋಡಿ-ನೋಡಿ ಹುಡುಗಿಯರೇ ಫೇಕ್.... ಎನ್ನುವ ಭಾವನೆ ನನಗೆ ಪ್ರಬಲವಾಗಿ ಬಿಟ್ಟಿದೆ ಅನಿಸುತ್ತಿದೆ!?”
 ಎಂದು, ಒಂದೊಂದೇ ಯೋಚನೆಯ ಕಡ್ಡಿಯಿಂದ ಪ್ರೇಮಕ್ಕೆ ಗೂಡು ಕಟ್ಟಲು ಪ್ರಯತ್ನಿಸುತ್ತಿದ್ದಂತೆ, ಧುತ್ತನೆ ನೆನಪಾದ ಫೇಕ್.... ಭೂತ ಬೆಳಗ್ಗೆಯಷ್ಟೇ ಕಾಡಿದ್ದು ಮತ್ತೆ ನೆನಪಾಗಿ, ಮನದಲ್ಲೇ ಕಟ್ಟುತ್ತಿರುವ ಪ್ರೇಮದ ಗೂಡನ್ನು ಕಿತ್ತುಹಾಕಲು ಧಾವಿಸುತ್ತಿರುವಂತೆ, ಮೈಯೆಲ್ಲಾ ಇನ್ನೇನು ಬೆವರಲು ಪ್ರಾರಂಭವಾಗುತ್ತದೆ, ಎನ್ನುತ್ತಿರಲಾಗಿ....
ಹುಂಭಾ.... ಹರೇ ಹುಂಭಾ..... ಹರೇ ಹರೇ ಹುಂಭಾಎಂದು ಜೋರಾಗಿ ಸ್ನೇಹಿತರೆಲ್ಲರೂ ತನ್ನನ್ನ ಅಣಕಿಸಿ ಕೂಗುತ್ತಿರುವುದಕ್ಕೆ ತಟ್ಟನೇ ಎಚ್ಚರಾಗಿ, ಗಾಬರಿಯಿಂದ ಹೊರಬಂದು, ಅರ್ಜುನ ಸನ್ಯಾಸಿಯ  ನಸು ನಗುವನ್ನ ನಟಿಸುತ್ತಾ, ಎಲ್ಲರೊಟ್ಟಿಗೇ ತಾನೂ ಕೂಗತೊಡಗಿ,
ಮನಸ್ಸಿನಲ್ಲೇ ಅಬ್ಬಾ....ಎಂದುಕೊಳ್ಳುತ್ತಾ ಅಲ್ಲೇ ನಿಟ್ಟುಸಿರೂ ಬಿಟ್ಟಿದ್ದೂ, ಕೂಗಿ-ಕಬ್ಬರಿಯುತ್ತಿರುವ ಯಾರಿಗೂ ಗೊತ್ತೇ ಆಗಲಿಲ್ಲ!!
ಗುರಿಯಿಲ್ಲದ್ದು ಕಾಲ, ಸೋಮನಾಥ ಪುರಕ್ಕೆ ಹೋಗುತ್ತಿರುವ ಗಾಡಿಗೆ ಹಾಗಾಗುತ್ತದೆಯೇ? ಪುರಕ್ಕೆ ಬಂದು, ಪಾರ್ಕಿಂಗ್ ಸ್ಫಾಟ್ ನೋಡಿ, ಗಾಡಿ ನಿಂತಿದ್ದೂ ಆಯಿತು.
ಎಲ್ಲರೂ ಇಳಿದು ಸೋಮನ ಗುಡಿಯಕಡೆ ತೆರಳತೊಡಗಿದರು.
ಹರಿಯೂ ಕೂಡ, ತನ್ನ ಕ್ಯಾಮರಾವ ಕುತ್ತಿಗೆಗೆ ತೂಗಿಸಿ, ಪ್ರವೇಶಕ್ಕೆ ನಿಗಧಿ ಪಡಿಸಿದ ಟಿಕೆಟ್ ಕೊಂಡು, ದೇವಾಲಯವನ್ನ ಪ್ರವೇಶಿಸಿದ.
ಆಗಲೇ ಅಲ್ಲಿಗೆ ಹಲವು ಕಡೆಯಿಂದ ಬಂದ ಜನ- ಕಲ್ಲಿನಲ್ಲೇ ನಿರ್ಮಿಸಿದ ಕಲಾಕೃತಿಯ
 ಸೊಬಗನ್ನ ತುಂಬು ಕಣ್ಣುಗಳಿಂದ ಆನಂದಿಸುತ್ತಿದ್ದರಲ್ಲದೇ, ಹೊತ್ತ ಕ್ಯಾಮರಾಗಳಲ್ಲೂ ತುಂಬಿಸಿಕೊಳ್ಳುತ್ತಿದ್ದರು. ಭಾವಗಳನ್ನೇ ಶಿಲೆಗಳಲ್ಲಿ ನಿಲ್ಲಿಸಿದಂತಿತ್ತು! ಸೂಕ್ಷ್ಮಾತಿ ಸೂಕ್ಷ್ಮಗಳನ್ನೂ ಅತಿ ಸುಂದರವಾಗಿ ತೋರಿಸಿದ್ದರು ಶಿಲ್ಪಗಳಲ್ಲಿ.
ಹರಿಯು ತಾನೂ ಎಲ್ಲರೊಟ್ಟಿಗೂ ಸೇರಿ ತನ್ನ ಕ್ಯಾಮರಾಕ್ಕೆ ಕೆಲಸ ಕೊಡತೊಡಗಿದ.
ನಾನಾ ವಿಧಗಳ ಕಲಾನೈಪುಣ್ಯಳಿಂದ ಬೆರಗುಗೊಳಿಸುವ ಕೆತ್ತನೆಗಳು, ತಮ್ಮ ಚಿತ್ರ-ವಿಚಿತ್ರ ಭಾವ ಭಂಗಿಗಳಿಂದ ಹೆಚ್ಚು-ಹೆಚ್ಚು ಫೋಟೋಗಳನ್ನ ಕ್ಲಿಕ್ಕಿಸಿಕೊಳ್ಳುತ್ತಿದ್ದರೆ, ಜೊತೆಗೆ ಬಂದ ಹರಿಯ ಸ್ನೇಹಿತರೂ ಆ ಶಿಲ್ಪಗಳಜೊತೆ ತಾವೂ ನಿಂತು, ಅವನನ್ನ ತಮ್ಮ ಫೋಟೋತೆಗೆಯಲು ಪೀಡಿಸುತ್ತಿದ್ದರು. ಅವರುಗಳ ಒತ್ತಾಯವನ್ನೂ ಪೀಡನೆಯೆಂದು ತಿಳಿಯದೇ ನಗು-ನಗುತ್ತಲೇ ಎಲ್ಲರೂಗಳನ್ನೂ ವಿವಿಧ ಪೋಸುಗಳಲ್ಲಿ ನಿಲ್ಲಿಸಿ ಫೋಟೋಗಳನ್ನು ತೆಗೆಯತೊಡಗಿದ ವಿಶಾಲಮನಸ್ಸಿನ ಹರೀ. ಹಾಗೇ ಒಂದೇಸವನೇ ಎದುರಿಗೆ ನಿಂತಿರುವವರನ್ನ ಕ್ಲಿಕ್ಕಿಸುವ ಸಮಯದಲ್ಲೇ, ಆನ್ ಮಾಡಿಕೊಂಡಿದ್ದ ಪ್ಲ್ಯಾಶ್, ಪಕ್ಕದಲ್ಲೇ ನಡೆದು ಹೋಗುತ್ತಿರುವ  ಆಕೃತಿಯಮೇಲೆ ಬಿದ್ದು ಪ್ರತಿಫಲಿಸಿ, ತನ್ನ ಹೃದಯವನ್ನೂ ಪ್ಲ್ಯಾಶ್ ಆಗುವಂತೆ ಮಾಡಿದ್ದರ ಬಗ್ಗೆ ಅಶ್ಟುಗಮನ ಕೊಡಲಾಗಲೇ ಇಲ್ಲ ಅವನಿಗೆ!!
ಎಲ್ಲಾ ಸ್ನೇಹಿತರನ್ನೂ ಮುಂದೆ ಕಳುಹಿಸಿ ದೇವಸ್ಥಾನದ ಹೊರವಲಯದ ಪ್ರಾಂಗಣವನ್ನ ಸುತ್ತಿಬಳಸಿ ಬರುತ್ತಿರುವಾಗ್ಗೆ ಹರಿಗೆ ಮತ್ತೆ ಅದೇ ಕಣ್ಣಿಗೆ ಬಿದ್ದಿತು.
ಇಂತದ್ದು ಆಗಲೇ ಬೇಕೆಂದಿದ್ದರೆ, ಅದು ಆಗಿ ತೀರುವುದೇ ಕಾಲದ ನಿಯಮವಲ್ಲವೇ? ಹರಿ-ಹರ-ಬ್ರಹ್ಮನಿಗೆ ಬಿಟ್ಟದ್ದು ಈ ಪ್ರೇಮದ ವಿಷಯದಲ್ಲಿ ಹುಂಭನೆಂದಾಕ್ಷಣ ಹರಿಗೆ ಬಿಟ್ಟಾನೆಯೇ ಕಾಲ!? ಯಾವ ಕಾಲದಲ್ಲಿ ಏನಾಗಬೇಕಿತ್ತೋ? ಅದೂ ಆಗಿಯೇ ಬಿಟ್ಟಿತು ಸೋಮನಗುಡಿಯಲ್ಲಿ!  
ಕರಿಯ ಶಿಲ್ಪಗಳಲ್ಲಿ ತುಂಬಿದ ಸೊಗಸು, ಇಲ್ಲಿ- ಹೇಗೆ, ಈ ಬಿಳಿಗೊಂಬೆಯಲಿ ಆಕರ್ಷಿಸಲ್ಪಟ್ಟವು ಎನ್ನುವುದೇ ಆಶ್ಚರ್ಯಕರವಾಗಿದ್ದು, ಅವನ ಕಣ್ಣುಗಳು ಎರಡಂಗುಲ ಅಗಲವಾದವು! ಮೊದಲು ನೋಡಿದಾಗೊಮ್ಮೆ- ತಾನು ನೋಡುತ್ತಿದ್ದ ಶಿಲ್ಪಗಳೇ ಅಮೃತದ ಶಿಲೆಯಾಗಿ ಜೀವಬಂದು ಓಡಾಡುತ್ತಿದೆ ಅನ್ನಿಸಿದ್ದರೂ, ಅದು ತನ್ನ ಭ್ರಾಂತಿಯಲ್ಲವೆನ್ನುವುದು ಕೆಲವೇ ಕ್ಷಣಗಳಲ್ಲಿ ಅವನಿಗೆ ತಿಳಿದುಹೋಯಿತು!
ಕೆತ್ತನೆಗಳಲ್ಲಿ ಎಲ್ಲಾ ನಾಜೂಕುಗಳನ್ನೂ ಅತಿ ಹತ್ತಿರದಿಂದಲೇ ನೋಡಿದ್ದ ಅವನಿಗೆ, ಈಗ ಅವುಗಳೇ ಆ ದೇಹದಲ್ಲಿ ಬಂದು ಆಶ್ರಯಿಸದ್ದನ್ನ ನೋಡಿ ಚಿತ್ತವನ್ನ ಬೇರೆಯದರೆಡೆ ಹೊರಳಿಸಲಾಗಲೇ ಇಲ್ಲ. 
ಹೃದಯವು ಮತ್ತೆ ಪ್ಲ್ಯಾಶ್ ಆಯಿತು!
ಅಲ್ಲಾಗಿದ್ದು ಅಂತಿಂತ ಪ್ಲ್ಯಾಶ್ ಅಲ್ಲ! ಹೃದಯದಲ್ಲೇ ಕಾಲ-ಕಾಲದಿಂದಲೂ ಹೊರಬರಲು ಕಾಯುತ್ತಿದ್ದ ಕಪ್ಪುರಂಧ್ರದಂತಿರುವ ಪ್ರೇಮದ ಸ್ಫೋಟದ ಪ್ರಖರತೆಯದು! ಆ ಬೆಳಕಲ್ಲಿ ಅವನಿಗೆ ಜಗತ್ತೇ ಮರೆಯಾಯಿತು!
ಆ ಬೆಳಕಿನಿಂದಲೇ ಆಗ ಕಟ್ಟಿದ್ದ ಪ್ರೇಮದ ಗೂಡಲ್ಲಿ ಈಗ ಬೆಳ್ಳಕ್ಕಿಯೊಂದು ಹಾರಿಬಂದು ಕುಳಿತಿತ್ತು!!
                             ***********************************
ಮನದ ಪ್ರೇಮದ ಭೇಗೆಗಳಿಗೆ ಔಷಧಿಯ ಲೇಪದಂತೆ ಅಲ್ಲಿ ಮುಂದೆ ಮುಂದೆ ಸಾಗುತ್ತಿದ್ದಳು ಬಿಳಿಯ ಹುಡುಗಿ. ಅವಳು ಎದುರು ಚಲಿಸುತ್ತಿರುವಾಗ, ಅವಳ ಬಣ್ಣ ಉಳಿದವರಿಗೆ ಅತೀ ಅನ್ನಿಸಿದರೂ ಹರಿಗೆ ಅದು ತಂಪನ್ನಕೊಡುವ ಬೆಳ್ಳಿಬೆಳದಿಂಗಳೇ.
“’ಪ್ರೇಮ ಕುರುಡುಎನ್ನುತ್ತಾರೆ! ಆದರೆ ನನ್ನ ಪ್ರೇಮವು ಹೇಗೆ ಇಷ್ಟು ಬಿಳುಪು!ಎಂದವನಿಗೆ ಅನ್ನಿಸಿದ್ದರೂ ಅನ್ನಿಸಿರಬಹುದು!
 ತನ್ನ ಮೊದಲ ಪ್ರೇಮವನ್ನ ಅನುಭವಿಸುತ್ತಿರುವ ಹರಿ, ತನ್ನ ಮನದ ಭಾವನೆಗಳನ್ನ ಹೇಗೆ ತಿಳಿಸಲಿ ಎಂದು ಯೋಚಿಸುತ್ತಲೇ ಪಕ್ಕದಲ್ಲೇ ತೆರಳುತ್ತಿರುವ ಹೆಂಗಸಿನ ಜಡೆಯಲ್ಲಿದ್ದ ಬಿಳಿಗುಲಾಬಿ ಕಂಡಿದ್ದೇ ಕ್ಷಣ, ಅದನ್ನೇ ಸೆಳೆದು ಅವಳ ಎದುರಿಗೆ ಹಿಡಿದೇ ಬಿಟ್ಟಿದ್ದ!!

ಉಪಸಂಹಾರ:
ಫೇಕ್.... ಫೇಕ್... ಫೇಕ್.... ಎಂದು ಅವನ ಮನದ ಮೂಲೆಯಲ್ಲೆಲ್ಲೋ ಕೂಗುತ್ತಿದ್ದ ಫೇಕ್ ಭೂತವೂ, ಅಲ್ಲೇ ಮೂಲೆಯಲ್ಲಿ ಬಿದ್ದಿರುವ ಭಿನ್ನ ವಿಗ್ರಹದಂತೆ ಪೆಚ್ಚಾಗಿ ಹರಿಯನ್ನೇ ನೋಡುತಿತ್ತು!! ಕಥೆಯೇ ಇಲ್ಲದವನಿಗೆ ಕಥೆ ಬರೆಯ ಹೊರಟ ಕಥೆಗಾರನಿಗೆ ಕೊನೆಯೇ ಸಿಗದೇ ಒದ್ದಾಡುತ್ತಿರುವಹಾಗೆಯೇ, ಹರಿಯ ಪ್ರೇಮ ಪ್ರಸಂಗವೂ ಮುಂಗಾರಿನ ಮಳೆಯಾಯಿತು!!

ಫೋಟೋ- ಗೋಪಾಲಕೃಷ್ಣ ಭಟ್. 

ಮಂಗಳವಾರ, ಏಪ್ರಿಲ್ 3, 2012

ನನಗೊಂದು ಹೆಣ್ಣು ಕೊಡಿ



     ’ಮಹಾಸ್ವಾಮಿ.. ನನ್ ಜಾತ್ಗ, ಮುಗ್ಧತೆಯನ್ನೇ ಮುಖ, ಕೈ-ಕಾಲುಗಳಲ್ಲಿ ತುಂಬಿ, ಮುದುರಿಕೊಂಡು ಮಹಾಸ್ವಾಮಿಯ ವಂದಿಸುತ್ತಾ, ಎದುರುನಿಂತು, ನನ್ನದೆಂದು ನಂಬಿಸಿದ ಜಾತಕವ ಟೇಬಲ್ ಮೇಲಿಟ್ಟಿದ್ದೆ.
ತುಸು ಬ್ಯುಜಿಯಂತೇ ತೋರುತಿದ್ದ ಅವರೋ, ಕೈಸನ್ನೆಯಲ್ಲಿಯೇ ಕುಳಿತುಕೊಳ್ಳಲು ಸೂಚಿಸಿದ್ದನ್ನ ನೋಡಿಯೇ, ಕುಳಿತೆ.
     
       ಜೋರು ತಿರುಗುತ್ತಿರುವ ಫೇನ್ ದೇ ಭಯವಿತ್ತು ನನಗೆ. ಮೂಲೇಲಿ ತಣ್ಣಗೆ ಕುಳಿತ .ಸಿ. ಯನ್ನಾದರೂ ಆನ್ ಮಾಡಿದ್ದರೆ, ಜೋರು ಗಾಳಿಯ ಭರಾಟೆಗೆ ಎರಡುದಿಕ್ಕುಗಳಿಗೂ ಹಾರಿ, ಯಾವಕಡೆ ಹೋಗಿ, ಯಾವ ಚೂರನ್ನು ಎತ್ತಿತರಲಿ? ಎನ್ನುವ ಸಂದಿಗ್ಧತೆಯಾದರೂ ದೂರವಾಗಿಸುತ್ತಿತ್ತೇನೋ ಎನ್ನುವ ದೂರದ ಆಸೆಯಿಂದ, ಮಾಹಾಸ್ವಾಮಿಗಳು ಎಷ್ಟುಬೇಗ ಜಾತಕವನ್ನ  ಕೈಲಿಡಿದು, ನನ್ನ ಸ್ಥಿರಾಸ್ಥಿಯನ್ನ ಕಾಪಾಡುತ್ತಾರೋ ಎಂದುಕೊಳ್ಳುತ್ತಾ ಅವರನ್ನೇ ನೋಡತೊಡಗಿದೆ.
   
    ತೀಡಿ-ತಿದ್ದಿದ ತ್ರಿಪುಂಡ್ರ ಭಸ್ಮ, ಅದರ ಕೆಳಗೆ ಕೆಂಪು ಬೊಟ್ಟು, ಆಕಡೆ-ಈಕಡೆ ನಿದ್ದೆಯಿಲ್ಲದೇ ಕೆಂಪಾದಂತಿರುವ ಕಣ್ಣು, ಕಪ್ಪು ಮೀಸೆ-ದಾಡಿಯ ನಡುವೆ ನಗು-ನಗುತ್ತಾ ಅಲ್ಲಾಡುತ್ತಿರುವ ತುಟಿ, ಕಿವಿಗಾನಿಸಿದ ಮೋಬೈಲ್ ಫೋನು, ಅದನ್ನ ಹಿಡಿದ ಹೆಚ್ಚು-ಕಮ್ಮಿ ಹತ್ತೂ ಬೆರಳಿಗೂ ಧರಿಸಿದ ಉಂಗುರಗಳಿರುವ ಕೈ, ಅದರ ಮಧ್ಯೆ ಕಿವಿಯಲ್ಲಿ ಜೋಲುತ್ತಿರುವ ಓಲೆ, ಎದ್ದು ಕಾಣಿಸುತಿತ್ತು. ಕೊರಳೆಂತೂ, ಅಷ್ಟು ಭಾರವನ್ನೂ ಹೊತ್ತು, ಬಗ್ಗಿಸದೇ ನಿಲ್ಲಬಹುದೆನ್ನುವುದನ್ನ ಸಾರಿ-ಸಾರಿ ಹೇಳುವಂತೆ, ಎಲ್ಲಾ ಶೈಲಿಯ ರುದ್ರಾಕ್ಷಿ, ಹರಳುಗಳ ರಾಶಿಯನ್ನ ಅಚ್ಚು ಬಂಗಾರಗಳ ಕವಚಗಳಿಂದ ಧರಿಸಿ ನೆಟ್ಟ ನಿಂತಿತ್ತು
     
       ಹೆಂಗಸರುಗಳು; ಯಾಕೆ ಬೆಳಗ್ಗೆ ಎದ್ದತಕ್ಷಣ ಟಿ.ವಿ. ಓನ್ ಮಾಡಿ ಭವಿಷ್ಯ ಓದುವ ಮಹಾಸ್ವಾಮಿಗಳನ್ನ  
ಕಣ್ಣು ಮಿಟುಕಿಸದೇ ನೋಡುತ್ತಾ ಕುಳಿತಿರುತ್ತಾರೆನ್ನುವುದು ಈಗ ಅಂದಾಜಾಯಿತು!
   
     “ಏನಯ್ಯಾ ನಿಂದು?
   
ತಟ್ಟನೆ ಎದುರುಬಂದ ಪ್ರಶ್ನೆಗೆ ಅವರ ಎದುರಿಗಿರಿಸಿದ ಜಾತಕದತ್ತ ಪುನಃ ಮುಗ್ಢ ದೃಷ್ಟಿದೋರಿದೆ.
   
ಬಲಗೈಲಿಡಿದು, ಎಡಗೈಯಿಂದ ಕನ್ನಡಕವ ಧರಿಸಿ ಅದರ ಮೇಲೆ ಕಣ್ಣಾಯಿಸ ತೊಡಗಿದರು ಮಾಹಾಸ್ವಾಮಿಗಳು.
    “
ನಿಂದೇನಯ್ಯಾ ಕುಂಡಲಿ?
   “ನ್ಹೂಂ....ಮಹಾಸ್ವಾಮಿ
   “ಹೆಸರು ................... ಹಂ! ಆರ್ದ್ರಾ ನಕ್ಷತ್ರ, ಮಿಥುನ ರಾಶಿ
   “ನ್ಹೂಂ ಸ್ವಾಮಿ
   “ಏನಯ್ಯಾ ಇದು, ಎಲ್ಲಾ ವಕ್ರ ವಕ್ರ ಇದೆತುಟಿಯಂಚಿನಲ್ಲಿ ನಕ್ಕು ನನ್ನ ಮೇಲೆ ದೃಷ್ಟಿತೋರಿ ನುಡಿದರು!
  
ನನಗೇನು ಹೇಳಬೇಕೆಂದು ತೋಚದೇ, ಕೈ-ಗಾಲುಗಳನ್ನ ಒಮ್ಮೆ ನೋಡಿ, ಸುಮ್ಮನೇ ಕುಳಿತೆ!!.
   “
ಗುರು ನೀಚ! ರಾಹು ವ್ಯಯ! ಅಷ್ಟಮ ಶನಿ! ಶತ್ರುಸ್ಥಾನೆ ರವಿ! ಯಾರನ್ನ ಉದ್ಧಾರ ಮಾಡೋಕೆ ಹುಟ್ಟೀರೋದಯ್ಯಾ ನೀನು??
   
ಧನಿ ಜೋರಾಗಿ, ಮನಸ್ಸನ್ನ ತಣ್ಣಗೆ ನಡುಕ ಉಂಟುಮಾಡಿತು!
   “
ಹಿಡಿದ ಕೆಲ್ಸ ಒಂದೂ ನೆಟ್ಟಗೆ ಮಾಡಲ್ಲ! ಚಂಚಲ ಬುದ್ಧಿ, ಅಂದುಕೊಳ್ಳೋದೊಂದು ಮಾಡೋದು ಇನ್ನೊಂದು, ಎಲ್ಲಾ ಕೆಲ್ಸ ಅರ್ಧಂಬರ್ಧ! ತಂದೆಗೇ ಕಂಟಕ, ನೀ ಹುಟ್ಟೀದ ಮನೆಲಿ ಮತ್ತೊಂದು ಹುಲ್ಕಡ್ಡೀನೂ ಹುಟ್ಟೋದಿಲ್ಲ!............
ವಾಚನ ಮುಂದುವರಿಯುತ್ತಿದ್ದಂತೆ ನಾ ಯೋಚನಾ ಮಗ್ನನಾದೆ,
  

     “ಬಹುಶಃ ನನ್ನೀ ಸ್ಥಿರಾಸ್ತಿಯನ್ನ ಮೊದಲೆಲ್ಲರೂ ನೋಡಿ ಒದರಿದ್ದು ಇದೇ! ಇದರಲ್ಲಿ ಅಂತ ವಿಶೇಷ ಇದ್ದಂತೇನೂ ಕಂಡುಬರಲಿಲ್ಲ! ಹಾಗಿದ್ದರೂ ಮತ್ಯಾಕೆ ಅವರ ಎದುರಿನಲ್ಲಿ ತಂದಿಟ್ಟದ್ದು??

  “ಜಾತಕ ಜೋಯ್ಸ್ರಿಗೆ ಕೊಟ್ಬರ್ಬೇಕು, ಪಕ್ಕದೂರಲ್ಲಿ ಯಾವ್ದೋ ಹುಡುಗಿ ಇದಾಳೆ ಅಂತೇಳ್ತಿದ್ರು,ಅಮ್ಮನ ಮಾತು ಕೇಳುತ್ತಾ,
   
     ಈ ದಿನ ಬೆಳಗ್ಗೆ ಕನ್ನಡಿ ಮುಂದೆ ನಿಂತಾಗ ಒಂದು ಕುತೂಹಲದ ಯೋಚನೆ ಬಂದು ನಕ್ಕಿದ್ದು ಸುಳ್ಳಲ್ಲ.
ತಿಳುವಳಿಕೆ ಬಂದಾರಭ್ಯ ನನ್ನ ನಾ ನೋಡುತ್ತಲೇ ಬದುಕಿರುವೆ,

     ಎತ್ತರದಲ್ಲಿ ಚೋಟುದ್ದ ಇದ್ದಂವ, ಆರಡಿ ಮನೆಬಾಗಿಲಿಗೆ ಸ್ವಲ್ಪ ಕಮ್ಮಿಯಾಗಿರುವೆ. ಅಗಲ ಅಷ್ಟೇನಿಲ್ಲದಿದ್ದರೂ ಆರೋಗ್ಯಕ್ಕೇನೂ ಕೊರತೆಯಿಲ್ಲ. ಸುರಸುಂದರ ಅಲ್ಲದಿದ್ದರೂ ಮನಸ್ಸಿನ, ಮುಖದ ಬಣ್ಣವನ್ನ ಮಾಸಿಕೊಂಡಿಲ್ಲ. ತಿಂಗಳ ಖರ್ಚೆಲ್ಲಾ ಬಿಟ್ಟೂ, ಮೀಗುವ ಸಂಬಳತರುವ ಕೆಲಸ. ಚೊಕ್ಕಟ ಮನೆಮಾಡಿಕೊಂಡು, ನನಗೆಂದು ಇರುವ ಅಮ್ಮಳೊಬ್ಬಳೊಟ್ಟಿಗೆ, ಧರೆಯನ್ನೇ ಸ್ವರ್ಗವಾಗಿಸಿಕೊಂಡು, ಸರಳ ಜೀವನ ನಡೆಸುತ್ತಿರುವುದು ಸುಳ್ಳಲ್ಲ. 
    ’ಬಹುಶಃ, ಪ್ರಪಂಚದ ಸುಖಪುರುಷರಲ್ಲಿ ನಾನೂ ಒಬ್ಬಎಂದು ಅಂದುಕೊಂಡಿದ್ದು ಹಲವುಬಾರಿ!!
     ಆದರೂ.....
      ಏನೆಲ್ಲಾ ಬದಲಾವಣೆಯಾಯಿತು! ಒಂದನ್ನ ಬಿಟ್ಟು... ನನ್ನ ಜಾತಕ!!
ಮೊದಲೆಲ್ಲಾ ಅಮ್ಮ ಎಷ್ಟುಬಾರಿ, ಯಾರ್ಯಾರ ಹತ್ತಿರ ಅದನ್ನ ತೋರಿಸಿದ್ದಳೋ, ನಾಕಾಣೆ!  
ತೋರಿಸಿದ ಪ್ರತಿಸಲವೂ ತಲೆ ಕೈಹೊತ್ತು,ಮುಂದೇನು ಗತಿಯಪ್ಪ!?ಅನ್ನುತ್ತಾ, ಕುಳಿತುಕೊಳ್ಳುತ್ತಿದ್ದಂತೂ ನಿಜ!
ಸಂದರ್ಭದಲ್ಲೆಲ್ಲಾ ನಾ ನಾದರೋ ಅಮ್ಮನನ್ನೇ ನೋಡುತ್ತಾ ಸುಮ್ಮನೇ ಕುಳಿತಿರುತ್ತಿದ್ದೆ. ಕೆಲವೊಮ್ಮೆ ಜಾತಕವ ಬಿಡಿಸಿ, ಅಂತದ್ದು ಅದರಲ್ಲಿ ಏನಿದೆ ಎನ್ನುವ ಕುತೂಹಲದಿಂದ ನೋಡುತ್ತಿರುತ್ತಿದ್ದೆ.
     
      ಏನೇನೋ ಸಂಖ್ಯೆಗಳು! ಏನೇನೋ ಅಕ್ಷರಗಳು! ವಿಜ್ಞಾನ ಪುಸ್ತಕಲ್ಲಿ ಓದಿ, ಆಕಾಶದಲ್ಲಿ ಸೂರ್ಯನ ಸುತ್ತಾ ತಿರುಗುವ ಗ್ರಹಗಳು ಹಾಳೆಯಲ್ಲೂ ಬರೆಯಲ್ಪಟ್ಟಿರುವುದನ್ನ ನೋಡಿ ಆಶ್ಚರ್ಯಪಟ್ಟಿದ್ದೆ! ರಾತ್ರೀಕಾಲದ ಆಕಾಶದಲಿ ಮಿನುಗುವ ಗ್ರಹ-ನಕ್ಷತ್ರಗಳೆಲ್ಲಾ ನನ್ನೀ ಜಾತಕದ ಮನೆಯಲ್ಲೇ, ಹಗಲೆಲ್ಲಾ ಮಲಗಿ, ವಿಶ್ರಾಂತಿತೆಗೆದುಕೊಳ್ಳುತ್ತವೆಂದು ಬಗೆದಿದ್ದೆ! ಹಾಗೆ ಬಂದವರು ಮನರಂಜನೆಗೆ ನನ್ನೇ ಆಟಿಕೆಯಾಗಿ ಆಡಿಸುತ್ತಾರೆಂದೂ ಅಂದುಕೊಳ್ಳುತ್ತಿದ್ದೆ. ಮಹಾ ಮಹಾ ಒಗಟುಗಳನ್ನೆಲ್ಲಾ ಬಿಡಿಸಿ ಒಗೆಯುತ್ತಿದ್ದ ನನಗೆ ಒಂದು ಹಾಳೆ ಮಾತ್ರಾ ಬಹುದೊಡ್ಡ ಒಗಟಾಗಿ ಕಾಡಿದ್ದು ಸುಳ್ಳಲ್ಲ!!
       
      ಆ ಒಗಟನ್ನ ಬಿಡಿಸಲು ಫಣತೊಟ್ಟಿದ್ದೂ.... ಫಣಕ್ಕೆ ಸರಿಯಾಗಿ ಇವತ್ತಿಗೆ ನಾ ಇರುವ ಪರಿಣಾಮ ಪಲರೂಪವಾಗಿ ದೊರಕಿದ್ದೂ ವಾಸ್ತವ!
     
     ಇಷ್ಟೆಲ್ಲಾ ಆಗಿಯೂ, ಹಾಳೆಯು ಮೊದಲು ಹೇಳಿದ್ದನ್ನೇ ಹೇಳುತ್ತದಯೇ?? ಅಥವಾ ನನ್ನೀ ಬದುಕಂತೆ ಅದರಲ್ಲೂ ಏನಾದರೂ ಬದಲಾವಣೆ ಆಗಿರಬಹುದೇ?? ಎನ್ನುತ್ತಾ ಟೀ.ವಿಯಲ್ಲಿ ಮಿಂಚುವ ಈ ಮಹಾಸ್ವಾಮಿಗಳ ನಂಬರ್ ಡಯಲ್ ಮಾಡಿ, ಅಪಾಯ್ಟ್ ಮೆಂಟ್ ಇವತ್ತಿನ ಸಂಜೆಯೇ ಸಿಕ್ಕು, ಬ್ರಹ್ಮಾಂಡ(ಜಾತಕ), ಮಹಾಸ್ವಾಮಿಯ ಕೈ-ಏರಿ ಕುಳಿತಿರುವುದಕ್ಕೆ ಕಾರಣವಾಗಿತ್ತು!
      
       ಈ ಎಲ್ಲಾ ಯೋಚನೆ ಮತ್ತೆ ನನ್ನ ಮೊಗದಲ್ಲಿ ಬೆಳಗ್ಗಿನ ಮಂದಹಾಸವನ್ನ ನೆನಪು ಮಾಡಿಸಿ, ಮನವನ್ನ ಹಗುರ ಮಾಡಿಸಿತ್ತಲ್ಲದೇ, ಜಾತಕದ  ದೊಡ್ಡಒಗಟನ್ನೇ ಬಿಡಿಸಿದ ಸಂತೋಷವೂ ಮಹಾ ಪ್ರಭೆಯನ್ನೇ ಉಂಟು ಮಾಡಿ, ತುಸು ನಗು- ಮುಖದಲ್ಲಿ ಮಿಂಚಿತು.
     
       ನನ್ನ ಮುಖದ ನಗುವನ್ನ ಗಮನಿಸಿಯೋ ಏನೋ, ಮಹಾಸ್ವಾಮಿಗಳ ಮಾತಿನ ದಾಟಿ ಬದಲಾವಣೆಯಾಗಿ, ಸ್ವಲ್ಪ ಹೊತ್ತಿಗೇ ಸುಮ್ಮನೆಯೂ ಆಗಿ, ಎಲ್ಲಾ ದೋಷಗಳಿಗೂ ಪರಿಹಾರವನ್ನ ಯೋಚಿಸುತ್ತಲೇ, ಜಾತಕವನ್ನ ನನ್ನೆದುರಿಗೇ ಇಟ್ಟು, ನನ್ನೇ ನೋಡುತ್ತಾ ಕುಳಿತರು.
     
       ನಾನಾದರೋ ಅದನ್ನ ಮಡಚಿ ಜೇಬಿಗಿರಿಸಿಕೊಳ್ಳುತ್ತಾ, ಅವರ ದಕ್ಷಿಣೆಯನ್ನ ಇರಿಸಿ, ಹೊರಡುತ್ತೇನೆಂದಷ್ಟೇ ಹೇಳಿ, ನಮಸ್ಕರಿಸಿ, ಹೊರ ಹೊರಟುಬಿಟ್ಟೆ.
      
      ಮಹಾಸ್ವಾಮಿಗಳಾದರೋ ನನ್ನೀ ಅನಿರೀಕ್ಷಿತ ಆಚರಣೆಗೆ ಚಕಿತರಾಗಿ, ನನ್ನೇ ನೋಡುತ್ತಿದ್ದುಬಿಟ್ಟರು!
ಬಾಗಿಲ ಪಕ್ಕದಲ್ಲಿಯೇ ಇದ್ದ ಡಸ್ಟ್ಬಿನ್ ನೋಡಿ, ತುಸು ನಿಂತೆ.
     
     ಮನಸ್ಸಿನ ಭಾರ ಹಗುರಾದದ್ದಾಯಿತು, ಇನ್ನು ಜೇಬನ್ನೂ ಸ್ವಲ್ಪ ಹಗುರ ಮಾಡಿಕೊಳ್ಳೋಣ ಎನಿಸಿದ್ದು ಸುಳ್ಳಲ್ಲ!
    
      ಮನೆಯಲ್ಲಿ ಮಗನ ಬರುವನ್ನೇ ಕಾದು, ಜಾತಕವ ಜೋಯಿಸರ ಕೈಗೆ ಕೊಡುವ ತರಾತುರಿಯಲ್ಲಿರುವ ಅಮ್ಮ ನೆನಪಾಗಿ, ಇದಿಲ್ಲದೇ ತೆರಳಿದರೆ ಅವಳ ಮುಖದಲ್ಲಾಗುವ ಆತಂಕದ ಗೆರೆಗಳನ್ನ ನೆನೆದು, ಮನ ಬದಲಾಯಿಸಿ ಹಾಗೇ ಮನೆಯ  ದಾರಿಯ ತುಳಿಯತೊಡಗಿದೆ.
      
     ನನ್ನ ಪುಣ್ಯಕ್ಕೆ ಪಾದಗಳಿಗೆ ಮನೆಯ ಅಡ್ರೆಸ್ ಗೊತ್ತಿದ್ದರಿಂದ ಸರಿಹೋಯಿತು! ಅವುಗಳ ಪಾಡಿಗೆ  ಅವು ಸಾಗಿ, ಮೊದಲೇ ಯೋಚನಾಲಹರಿಯಲ್ಲಿ ತಲ್ಲೀನನಾಗಿಬಿಡುವ ನನಗೆ ಮನೆತಲುಪಿದ್ದೆ ಗೊತ್ತಾಗಲಿಲ್ಲ!!
  
      ಅಮ್ಮನ ಜೊತೆಜೋರು ಜೋರು ಮಾತನಾಡುತ್ತಿರುವ, ಕಂಡು ಬಹಳೇದಿನವಾಗಿರುವ ಗೆಳೆಯ ಮುಕುಂದನ ಧನಿ ಹೊರಬಾಗಿಲವರೆಗೆ ಕೇಳಿ, ತುಸು ಉತ್ಸುಕನಾಗಿಯೇ ಮನೆಯೊಳ ಅಡಿಯಿಡುತ್ತಲೇ ಹೇಳಿದೆ....

      “ಏನಯ್ಯಾ ದೊರೆ, ಇವತ್ತೇನು ನಿನ್ನ ಬ್ಯುಸಿ ಮೈಂಡ್ ನಮ್ಮನ್ನ ನೆನಪಿಸ್ಕೊಂಡಿದೆ! ನೀನು ಬಂದಿದ್ದಿ ಅಂತಾದ್ರೆ ಏನೋ ವಿಶೇಷ ಇರ್ಲೇಬೇಕಲ್ವೇ? ಬೇಗ ಹೇಳು ಮರಾಯಾ ನೀ ಬಂದಿರೋ ಖುಷಿಲೇ ಅದ್ನೂ ಅನುಭವ್ಸಿ ಬಿಡ್ತೀನಿ

      “ಹಾ..ಹಾ..ಹಾ.. ಬಾ ಬಾ. ಸ್ನೇಹಿತ ಅಂದ್ರೆ ನೀ ನೋಡು! ನನ್ನೆಸ್ಟು ಕರೆಕ್ಟ್ ಆಗಿ ಜಡ್ಜ್ ಮಾಡ್ದೆಎನ್ನುತ್ತಾ ಎದ್ದುನಿಂತು ನನ್ನ ಮನೆಗೆ ನನ್ನೇ, ನಗುತ್ತಾ ಸ್ವಾಗತಿಸಿದ ಮುಕುಂದ.

      ಉಭಯಕುಶಲೋಪರಿಯನ್ನ ಕೇಳಿ, ಮಾತನಾಡಿಕೊಳ್ಳುತ್ತ, ಕೈ-ಕಾಲು ತೊಳೆದು ಬಂದ ನಮಗೆ ಅಮ್ಮ ತಂದಿಟ್ಟ, ಟೀ-ಉಪಹಾರ ಸೇವನೆಯೂ ಆಯಿತು.

     “ಇವತ್ತು ನಿಮ್ಮನೇಲೆ ರಾತ್ರಿಯ ಊಟನೂ ಮಾಡೇ ಹೋಗ್ತೀನಿಎನ್ನುವ ಅವನ ನಿಸ್ಸಂಕೋಚ ಮಾತನ್ನ ಕೇಳಿದ ಅಮ್ಮ ಖುಷಿಯಿಂದಲೇ ಅಡಿಗೆ ತಯಾರಿಗೆ ಒಳನಡೆದರೆ, ನಮ್ಮಿಬ್ಬರ ಎಷ್ಟೋದಿನಗಳಿಂದುಳಿದ ಮಾತು-ಕಥೆಗೆ ವೇದಿಕೆ ಸಜ್ಜಾಯಿತು.

      “ಎಲ್ಲಿವರೆಗೆ ಬಂತಪ್ಪಾ ನಿನ್ನ ಮದುವೆಯೂಟ ನೀಡುವ ತಯಾರಿ?” ಅವನ ಮನೆಯಲ್ಲಿ ಹೆಣ್ಣುನೋಡುತ್ತಿರುವ ವಿಚಾರ ತಿಳಿದೇ ಇದ್ದ ನಾನು ಅವನಲ್ಲಿ ಪ್ರಶ್ನಿಸಿದೆ.
 
       “ಅಯ್ಯೋ! ಅದನ್ನ ಕೇಳ್ಬೇಡಪ್ಪ. ಸಾಕೋ-ಬೇಕೋ ಆಗ್ತಿದೆ!” ಬೇಸರದ ಧನಿಮಾಡಂದ ಮುಕುಂದ.

      “ಯಾಕೋ.....?” ಕಳಕಳಿಯ ಪ್ರಶ್ನೆ ನನ್ನದು.

      “ಅಮ್ಮನಿಗೆ ಒಂದು ಹೆಣ್ಣೂ ಆಗಿಬರುತ್ತಿಲ್ಲ! ಬಂದ ಹೆಣ್ಣುಗಳಲ್ಲೆಲ್ಲಾ- ಒಂದಷ್ಟಕ್ಕೆ ಜಾತಕ ಕೂಡಿಬರುತ್ತಿಲ್ಲ, ಕೆಲವೊಂದಕ್ಕೆ ಬಣ್ಣ ಇಲ್ಲ! ಗುಣವಿರದೇ ಇರುವುದು ಒಂದಷ್ಟಾದರೆ, ಮತ್ತೊಂದಿಷ್ಟು ಹೆಣ್ಣುಗಳೇ ಜೋರು, ಇನ್ನೊಂದಷ್ಟರ ಮನೆಗೇ ಸಂಸ್ಕಾರವೇ ಇರುವುದಿಲ್ಲ! ಒಟ್ಟಿನಲ್ಲಿ ಹೆಣ್ಣುಗಳ ಮನೆಗೆ ಪೆರೇಡ್ ಮಾಡಿ-ಮಾಡಿಯೇ ನನ್ನಾಯಸ್ಸು ಮುಗಿಯುವುದೋ ಅನಿಸುತ್ತಿತ್ತು
      
       ಮುಗ್ಧಮಾತಿನಂದದ್ದು ಕೇಳಿ, ’ಪಾಪ..’ ಅನಿಸಿದ್ದರೂ, ಸುಮ್ಮನೇ ಕೆಣಕುವ ಮನಸ್ಸಾಗಿ,
 
    “ಹ ಹ ಹ.... ಮದುವೆ ನಿನಗೋ? ನಿಮ್ಮಮ್ಮನಿಗೋ? ಹುಡುಗಿ ಸಿಗುವುದೇ ಕಷ್ಟವೆನ್ನುವ ಈ ಕಾಲದಲ್ಲಿ ಅಮ್ಮನಿಗೆ ಸ್ವಲ್ಪ ಬುದ್ಧಿ ಹೇಳಿ, ಯಾರಾದ್ರೂ ಶಕುಂತಲೆನ ಕಟ್ಕೋಳ್ಬಾರ್ದಾ?” ನಗುತ್ತಾ ಕೇಳಿದೆ.
ನೀ ನಗ್ಬೇಡ ಮರಾಯಾ! ಮೊನ್ನೆ ಆದದ್ದೂ ಅದೇ ಕಥೆ.......” ಅನ್ನುತ್ತಾ, ಆಸಕ್ತಿಕರ ವಿಷಯವಾದ್ದರಿಂದ ತುಸು ನನ್ನಕಡೆ ಸರಿದು ಮುಂದುವರಿದ,
   
      “ಜಾತಕವೆಲ್ಲಾ ಕೂಡಿಬಂದು, ಹುಡುಗಿ ಫೋಟೋದಲ್ಲಿ ಲಕ್ಷಣವಾಗಿರುವುದನ್ನ ನೋಡಿ ಅವರಮನೆಗೆ ಹೋದದ್ದಾಯಿತು. ಅಲ್ಲಿಯ ಸಂಭ್ರಮ ಏನಂತೀಯಾ? ಹೆಣ್ಣು ನೋಡುವ ಶಾಸ್ತ್ರವೇ ಹೀಗಾದರೆ, ಮದುವೆ ಇನ್ನೇಗಪ್ಪಾ? ಅನ್ನುವಸ್ಟು ಸಂಭ್ರಮ ಅಲ್ಲಿತ್ತು. ಪ್ರಾರಂಭದ ಉಪಚಾರ ಎಲ್ಲಾ ಮುಗಿದು, ಹುಡುಗಿಯನ್ನ ಕರೆದರು.
 
     ಏನು ಚಂದ ಇದ್ಲು ಅಂತಿ! ಫೋಟೋದಲ್ಲಿದ್ದಕ್ಕಿಂತ ಎದುರಿನಲ್ಲೇ ಅದ್ಭುತ ಅನ್ಸಿದ್ದು ಸುಳ್ಳಲ್ಲ ಮಾರಾಯಾ! ಅವಳ ನಡೆ, ವಯ್ಯಾರ ಇನ್ನೂ ಕಣ್ಣಿಗೆ ಕಟ್ಟಿದ ಹಾಗಿದೆ. ಮಾತೂ ಮತ್ತೆ ಮತ್ತೆ ಕೇಳ್ಬೇಕು ಅನಸ್ತಿತ್ತು, ಅಷ್ಟು ಸುಂದರ. ಸುಶೀಲೆ. ಬುದ್ಧಿವಂತೆ ಕೂಡ, ಡಬಲ್ ಡಿಗ್ರಿ ಗ್ರಾಜುಯೇಟ್! ನನಗವಳನ್ನು ವಲ್ಲೇ... ಎನ್ನಲು ಕಾರಣವೇ ಇಲ್ಲ! ಅಂತದ್ರಲ್ಲಿ ನನ್ನಮ್ಮ ಏನೋ ನೆವ ಹೂಡಿ ಒಳಹೋದವಳು, ತಟ್ಟನೇ ಹಿಂತಿರುಗಿ, ಒಂದೇ ಸವನೆ ಹೊರಡಲು ಒತ್ತಾಯ ಮಾಡಿದ್ದೇ ಮಾಡಿದ್ದು! ನನಗೂ-ಅಪ್ಪನಿಗೂ ಯಾಕಿವಳು ಇಷ್ಟು ಒತ್ತಾಯ್ಸುತ್ತಿದ್ದಾಳಪ್ಪ ಅನೋದೇ ಬಗೆಹರಿದೇ ಹೊರಟುನಿಂತ್ವಿ! ಹಾಗೇ, ದಾರೀಲಿ ಅವಳನ್ನು ಕೇಳಿಯಾಯ್ತು,
      
     ’ಯಾಕಮ್ಮಾ ಅಷ್ಟು ಅವಸರಿಸಿದೆ?’

     ಅವ್ಳು ಹೇಳಿರೋ ಕಾರಣಕ್ಕೆ ನನಗೆ ಅಳಬೇಕೋ? ನಮ್ಮಮ್ಮನಿಗೆ ಬುದ್ದಿಯಿಲ್ಲವೆಂದು ವ್ಯಥೆ ಪಡಬೇಕೋ... ಅಂದುಕೊಳ್ಳುತ್ತಾ ಹಣೆ-ಹಣೆ ಚಚ್ಚಿಕೊಂಡೆ!!”
 
     “ಅಂತದ್ದು ಏನಿತ್ತೋ?”

      “ಒಳಗೋದ ಅಮ್ಮಾ ಅವಳ ಕಾಲ ಬೆರಳ ನೋಡಿದ್ಲಂತೆ! ಅವು ಸ್ವಲ್ಪ ಆಕಾರಕ್ಕೆ ತಕ್ಕದಿಲ್ದೇ ಸ್ವಲ್ಪ ಉದ್ದವಾಗಿತ್ತಂತೆ!! ಇಸ್ಟೇ!! ಬೇಡವೇ ಬೇಡ... ಉದ್ದ ಬೆರಳಿರೋ ಹೆಣ್ಣು ಮಗನಿಗ್ಯಾಕೆ? ತಾನೇ ನಿರ್ಧರಿಸಿ.... ಹಾಗೇ ನಮ್ಮನ್ನ ಹೊರಡಿಸಿ.............”

       ಅವನ ಮಾತು ಮುಗಿಯುವ ಮೊದಲೇ ನಗು ತಡೆಯಲಾಗಲಿಲ್ಲ ನನಗೆ! ಹೊಟ್ಟೆ ಹುಣ್ಣಾಗುವಷ್ಟು ನಕ್ಕಿದ್ದೇ ನಕ್ಕಿದ್ದು!
ನನಗೆ ನಗು ನಿಲ್ಲುವವರೆಗೆ ಸುಮ್ಮನಿದ್ದು ಮತ್ತೆ ಮುಂದುವರಿಸಿದ.

       “’ಅಪ್ಪಾ! ನನಗೆ ಇದೆಲ್ಲಾ ಸಾಕೋ ಸಾಕು. ಮದುವೆ ಆದ್ರೆ ಇವ್ಳನ್ನೇ. ನನಗೆ ಮತ್ಯಾರನ್ನೂ ತೋರಿಸ್ಲೂ ಬೇಡಿ, ಇಷ್ಟ ಆಗೋದು ಇಲ್ಲ, ಅಮ್ಮನನ್ನ ನೀನು ಹೇಗೆ ಒಪ್ಪಿಸುತ್ತಿಯೋ, ನಾ ವಲ್ಲೆ!’ ಅನ್ನೋ ಮಾತನ್ನ  ಖಡಾಕಂಡಿತ ಹೇಳಿ ನಾ ಸುಮ್ಮನಿದ್ದು ಬಿಟ್ಟೆ. ಅಮ್ಮನನ್ನ ಒಪ್ಪಿಸುವ ಹೊಣೆ ಹೊತ್ತ ಅಪ್ಪ ನನ್ನ ಮಾತಿಗೆ ಸಮ್ಮತಿ ನೀಡಿ, ಮದುವೆಗೆ ಒಪ್ಪಿಗೆ ಸೂಚಿಸಿದ್ದೂ ಆಯಿತು.”
       
      ನಾನು ನಗುತ್ತಲೇ, “ಬಪ್ಪರೇ! ಅಂತೂ ಮುಕುಂದನ ಕನ್ಯಾ ವೀಕ್ಷಣಾ ಪ್ರಹಸನದ ನಾಟಕಕ್ಕೆ ಇಲ್ಲಿಗೆ ತೆರೆಯೆಳೆದಂತಾಯಿತು ಅನ್ನು. ಅಂತೂ ಒಳ್ಳೆಯವರಿಗೆ ಒಳ್ಳೆಯದೇ ಆಗುತ್ತೆ ಅನ್ನುವುದು ಮತ್ತೊಮ್ಮೆ ಸಾಭೀತಾಯಿತು, ನಿನ್ನ ಸಂಜಯ್ ನ ಕಥೆ ಕೇಳು ಮಾರಾಯಾ, ಹೆಣ್ಣು ನೋಡಲಿಕ್ಕೆ ಹೋಗಿ, ಆ ಹೆಣ್ಣು ನಿನ್ನ ಜೊತೆ ಆರು ತಿಂಗಳು ಇರುತ್ತೇನೆ, ಆಮೇಲೆ ನೀನು ಇಷ್ಟವಾದರೆ ಮದುವೆ ಎಂದಳಂತೆ! ಇವನು ಒಮ್ಮೆಲೇ ತಬ್ಬಿಬ್ಬಾಗಿ, ಅಲ್ಲಿಂದ ಒಂದೇ ಓಟವಂತೆ.... ಹ್ಹಾ.. ಹ್ಹಾ.. ಹ್ಹಾ....!!”
      
      ಇಬ್ಬರದೂ ನಗು ಜೋರಾಗಿದ್ದು, ಅಮ್ಮ ಊಟಕ್ಕೆ ಕರೆದದ್ದೇ ಕೇಳಿರಲಿಲ್ಲ.
    
      “ಅವ್ನ ಕಥೆ ಬಿಡು, ಮೊನ್ನೆ ಪೇಪರ್ ನೋಡದ್ಯಾ? ಮದುವೆ ಆಗಿ ಮಾರನೇ ದಿನವೇ ಹುಡುಗಿ ಪರಾರಿ!!”
ಆ ಪ್ರಹಸನವೂ ನೆನಪಾಗಿ ಇಬ್ಬರ ನಗೂ ಅಬ್ಬರಕ್ಕೇರಿರುವಾಗಲೇ ಅಮ್ಮನ ಕೂಗು ಮತ್ತೆಕೇಳಿ, ತಟ್ಟೆಗೆ ಹೋಗಿ ಕುಳಿತುಕೊಳ್ಳುವಂತೆ ಮಾಡಿತು.
      
      “ಏನಪ್ಪಾ, ನೀವಿಬ್ರು ಜೊತೆ ಗೂಡ್ಬಿಟ್ರೆ ಜಗತ್ತು ಕತ್ತಲೆ ಆದದ್ದನ್ನೇ ಮರ್ತುಬಿಡ್ತೀರಲ್ಲಾ, ಎಷ್ಟು ಬಾರಿ ಕುಗೋದು ನಿಮ್ಮನ್ನ?” ಎನ್ನುತ್ತಿದ್ದ ಅಮ್ಮನ ಮಾತಿಗೆ,
       
       “ಅಮ್ಮಾ, ನೀನು ಒಂದು ಸೊಸೆ ಹುಡುಕ್ಕೋ, ನಮ್ಮನ್ನ ನಮ್ಮ ಪಾಡಿಗೆ ಬಿಟ್ಬಿಡುಎನ್ನುತ್ತಲೇ ನನ್ನಕಡೆ ನೋಡಿ ಕಣ್ಣು ಮಿಟುಕಿಸಿದ ಮುಕುಂದ!
   
       “ನೋಡುವುದೇ......” ಇಂತಿಷ್ಟೇ ಹೇಳಿ ಅಮ್ಮ ಬಡಿಸತೊಡಗಿದ್ದಳು.
ನಾನಾದರೋ ಅಮ್ಮನ ಎದುರಿಗೆ ಆ ಮಾತೆತ್ತದೇ ಸುಮ್ಮನಿರುವಂತೆ ಸನ್ನೆಯಲ್ಲೇ ಸೂಚಿಸಿ, ನಿಧಾನ ಊಟಮಾಡುವಂತೆ ಹೇಳಿ ಅಮ್ಮ ಬಡಿಸಿದ ಅನ್ನ, ಹುಳಿಯನ್ನ ಉಣ್ಣತೊಡಗಿದೆ.
ಉಂಡು ಡರ್ರ್.... ಅಂತ ತೇಗಿದ ಮುಕುಂದ, “ಅಮ್ಮನ ಕೈರುಚಿ ಅಂದ್ರೆ ರುಚಿನೇ, ದೇಹ ಮುಪ್ಪಾದ್ರೂ-ರುಚಿಗೆ ಮುಪ್ಪಿಲ್ಲ ನೋಡುಎನ್ನುತ್ತಾ ನಗೆಯಾಡಿದ.
     
       ಅಮ್ಮನಾದರೋ ತುಸು ನಗುತ್ತಲೇ, ”ಹೌದಪ್ಪಾ! ಇನ್ನೆಷ್ಟು ದಿನ? ಬರುತ್ತಾಳಲ್ಲ ನಿಮ್ಮನೆಗೇ ನಿನ್ನ ವಯ್ಯಾರಿ..... ಬಡಿಸಿ ಉಣಿಸುತ್ತಾಳೆ, ಆಗೆಷ್ಟು ದಿನ ನನ್ನ ನೆನಪು ಮಾಡಿಕೊಳ್ಳುತ್ತಿ, ನೋಡುವಾ!” ಎನ್ನುವ ಮಾತನ್ನ ಕೇಳಿ, ತಾನು ಮಾತಾಡಿದ್ದು ಅಮ್ಮನ ಕಿವಿಗೂ ಬಿದ್ದಿದೆ ಅನ್ನುವುದನ್ನ ಅರಿತು! ನಾಚುತ್ತಲೇ ಹೋಗಿಬರುವೆನೆಂದು, ಅಮ್ಮನಿಗೆ ನಮಸ್ಕರಿಸಿ,
ಹೇಳುತ್ತೇನೆ, ಒಂದು ವಾರ ಮೊದಲೇ ಬರಬೇಕುಅನ್ನುತ್ತಾ ನನಗೂ ವಿದಾಯವನ್ನು ಹೇಳಿದ ಮುಕುಂದ.
ಅಮ್ಮ ಊಟಮುಗಿಸಿ, ನನ್ನ ಬಳಿಬಂದು, “ನಿನ್ನ ವಾರಗೆಯರಿಗೆಲ್ಲಾ ಮದುವೆ ನಿಕ್ಕಿಯಾಯ್ತು, ಇನ್ನು ನಿನಗ್ಯಾವಾಗ್ಳೋ... ಇವತ್ತು ಜೋಯಿಸರಿಗೆ ಜಾತಕ ಮುಟ್ಟಿಸಲೇ ಆಗಲಿಲ್ಲ.” ಅನ್ನುತ್ತಾ, ಬೆಳಗ್ಗೆ ಕೊಟ್ಟ ಜಾತಕವ ಕೇಳಿ, ಒಯ್ದಳು.
ಜಾತಕವನ್ನ ಯಾವಾಗ ಎತ್ತಿಅವಳ ಕೈಗೆ ಕೊಟ್ಟೆನೋ, ಆ ಕ್ಷಣದಿಂದಲೇ ಗ್ರಹ-ತಾರೆಗಳೆಲ್ಲಾ ನನ್ನ ಕಣ್ಣಮುಂದೆ ನರ್ತಿಸುತ್ತಾ, ಹೊಸದೊಂದು ಯೋಚನೆಗೆ ನೂಕಲು ಸಿದ್ಧಗೊಳ್ಳುವಂತಾಯಿತು!!
       
      ಅವುಗಳನ್ನ ಓಡಿಸಲು ಪ್ರಯತ್ನಿಸುತ್ತಾ, ದಿನ ನಿತ್ಯದ ಕರ್ಮದಂತೆ ಓದಲು ಕುಳಿತುಕೊಳ್ಳಲು ಪ್ರಯತ್ನಿಸಿದೆ.
ಯಾಕೋ ಏನೋ ಓದಲೂ ಮನಸಾಗದೇ ಪುಸ್ತಕವ ಮುಚ್ಚಿ, ರೂಮಿನ ಕಿಟಕಿ ಬಳಿ ನಿಂತು ಆಕಾಶವ ನೋಡುತ್ತಾ ನಿಂತದ್ದೇ ತಡ, ನಾ ಖಾಲಿಯಾಗಲೇ ಕಾಯುತ್ತಿದ್ದ ಯೋಚನೆಗಳು ಒಮ್ಮೆಲೇ ದಾಳಿಗಿಟ್ಟವು



      “ಅಮ್ಮ ನಾಳೆ ಜಾತಕವ ಜೋಯಿಸರ ಕೈ-ಸೇರಿಸುತ್ತಾಳೆ! ಮುಂದೇನು ಕತೆ? ಮೊದಲು ನೋಡುವುದೇ ಜಾತಕವನ್ನಂತೆ!! ಆಮೇಲೇನಿದ್ದರೂ ನಾ ನೋಡಲು ಬರುವುದನ್ನ ಒಪ್ಪುವುದು! ನನ್ನ ಅವರು ನೋಡುವುದು!!
 ಮೊದಲೇ ನನ್ನೀ ಜಾತಕವನ್ನ ನೋಡಿದವರಾದರೋ ನನಗೆ ಹೆಣ್ಣು ಕೊಡಲು ಒಪ್ಪಿಯಾರೇ?? ಇರುವ ದೋಷಗಳೆನ್ನೆಲ್ಲಾ ಮರೆತು ಧಾರೆಯೆರುವರೇ ನನಗೆ? ಜಾತಕವೆಂಬ ಅರ್ಥವಾಗದ ಜೀವನದ ಕಾಗುಣಿತದ ಲೆಕ್ಕದಲ್ಲೇ ತೊಡಗಿದ ಸಂಕುಚಿತ ಭಾವನೆಯ ಜನರಲ್ಲಿ, ಎಲ್ಲವನ್ನೂ ಮೆಟ್ಟಿನಿಂತ ವ್ಯಕ್ತಿಯ ಗುರುತಿಸುವವರು ಯಾರಿಹರು ಇಲ್ಲಿ??

      ಎಂದು ಪ್ರಶ್ನಿಸಿದ್ದೇ ತಡ!! ನನ್ನ ಮನವೇ ಚಂದ್ರಮನ ರೂಪಧರಿಸಿದಂತಾಗಿ ನಕ್ಕು ನುಡಿಯಿತು, “ಎಲೈ ಮುಗ್ಧ, ಯಾಕಿಷ್ಟು ಒದ್ದಾಟ! ಇಷ್ಟುದಿನವೂ ನೀನು ಖಾಲಿಯಾಗಿ ಬದುಕಿಲ್ಲವೇ? ನಿನಗ್ಯಾಕೆ ಯಾರ ಹಂಗು? ನಿನಗೆ ನಾನಿಲ್ಲವೇ, ನಿನ್ನ ಮನದಂಗಳದಿ ತುಂಬಿರುವ ಗ್ರಹ-ತಾರೆಗಳಿಲ್ಲವೇ? ಅದೇ ಜಗತ್ತು! ಅದೆಲ್ಲವೂ ನಿನ್ನದಲ್ಲವೇ? ನಿನ್ನವುಗಳೇ ಅಲ್ಲವೇ? ಜಗತ್ತೇ ನಿನ್ನದಾಗಿಸಿಕೊಂಡು ಏನೂ ಇಲ್ಲದಂತೇ ಯಾಕಿರುವೆ? ನಿನ್ನ ಹೆಂಗಸು ಮನಕ್ಕೆ ಧಿಕ್ಕಾರವಿರಲಿ!!”
 
       ಎನ್ನುವುದನ್ನ ಕೇಳುತ್ತಲೇ ಹಾಸಿಗೆಯ ಮೇಲುರುಳಿದ್ದೆ. ಆ ರಾತ್ರಿಯೇ ನನಗೊಂದು ಕನಸಾಯಿತು............” ಕುಳಿತಿದ್ದೆ ಸುಮ್ಮನೇ!! ಹೆಂಗರೆಳೆಯರೆಲ್ಲಾ ಬಂದು ಸಾಗಿದ್ದರು. ನನ್ನದೇನೂ ಇಲ್ಲಾ..... ಮಾತಿಲ್ಲ.... ಕಥೆಯಿಲ್ಲಾ.... ಒಂದು ನಗುವೂ ಇಲ್ಲ..... ಎಲ್ಲರೂ  ಮದುವೆಯ ಊಟಕ್ಕೇ ಕುಳಿತಿದ್ದರು..... ನಾನೂ ಕುಳಿತಿದ್ದೆ... ಕುಳಿತಲ್ಲಿಯೇ!! ಹಸಿವೆಯಿಲ್ಲದೆಯೇ.... ಬಾಯಾರಿಕೆ ಇಲ್ಲದೆಯೆ..... ನಿರ್ಲಿಪ್ತ!?
  
         ಅಲ್ಲಾ.....!! ಬೆಳಕು ಆರಿತ್ತು, ಊಟಕ್ಕೆ ಕುಳಿತಸಮಯದಲ್ಲೇ!! ನಾನಾಗ ಎದ್ದಿದ್ದೆ..... ಕುಳಿತಲ್ಲಿಂದ.......... ಬೆಳಕ ಹೊತ್ತಿಸಲು..... ಎಲ್ಲರ ಊಟ ತಡೆಯಿಲ್ಲದೇ ಸಾಗಲು...... ಆಗಲೇ ಮಿಂಚಿತ್ತು, ನನ್ನ ಮುಖದಲ್ಲೊಂದು ನಗುವು......

.............................................
ಮುಗಿಯಿತು....