ಪ್ರತಿಯೊಂದ್ರ ಪ್ರಾರಂಭ
ಗೆಲ್ಸೇ ಬಿಡ್ತು ಅಂತೇನಿಲ್ಲೆ. ಗೆಲ್ಸಿ, ಹುಚ್ಚೆಬ್ಸಿದ
ಪ್ರಾರಂಭ ಕೊನೆವರ್ಗೂ ಅದ್ನೇ ಮುಂದ್ವರಸ್ಕಂಡು ಬರ್ತು ಹೇಳ್ವಂಗೇನೂಇಲ್ಲೆ. ಗೆದ್ದಂವ ಯಾವತ್ತೂ ಗೆಲ್ತನೇ ಇರ್ತ ಅನ್ನದಪವಾದ. ಸೋಲ್ತಾ ಇಪ್ಪಂವ
ಸೋಲ್ತನೇ ಇರ್ತ, ಇದು ಸತ್ಯಕ್ದೂರ. ಸೋತಂವ ಎಲ್ಲಿವರ್ಗೆ
ತನ್ನ ಪ್ರಯತ್ನಬಿಡದೇ ಸಾಗ್ತಿರ್ತ್ನ, ಅವಂಗೆ ಗೆಲುವು ಒಲಿಯದ್ದೇನಿರ್ತಿಲ್ಲೆ!
ಹಂಗೆಸಿಕ್ಕ ಗೆಲುವು ಸುಖವನ್ನೇ, ಕೊಡ್ತೇಹೊರ್ತು,
ಸೋಲಿನ ನೋವನ್ನೆಂತೂ ಅಲ್ಲ. ಒಂದ್ವೇಳೆ ಸೋತ್ರೂ,
ಅದು ಮತ್ತೆಮಾಡ ಪ್ರಯತ್ನದ ದಾರಿಯನ್ನೇ ಸೂಚಿಸ್ತು. ಸುಖದ
ದಾರೀಲ್ಲೆ ಸಾಗೋ ಹಂಗೆ ಮಾಡ್ತು. ಕೇವಲ ಖುಷಿಕಡೆಗೆ......
**************************************************************
ರವಿ ತನ್ನ ಕಿರಣದ ರೇಕುಗಳಂಗೇ
ಇದ್ದ ಕೈಗಳನ್ನ ಉದ್ದುದ್ದ ಚಾಚ್ತಾ, ಭೂತಾಯಿಯ ಮಕ್ಳಾದ ಹಕ್ಕಿಗಳ್ನೆಲ್ಲಾ
ಎಬ್ಬಿಸ್ತಾ ಅವಗಷ್ಟೇ ಮೇಲೇರ್ತಾ ಇದ್ದಿದ್ದ. ಎದ್ದಹಕ್ಕಿಗಳ ಮೃದು ಕಂಠದಿಂದ ಬರ್ತಾಇರ ಸ್ವರಗಳು, ಹಿತ್ಲಿನ
ಮರವನ್ನ ಆಸ್ರೆಯಾಗಿಟ್ಕಂಡು ಬೆಳ್ಕಂಡಿರ ಹಸಿರುರಾಶಿಯ ಬಳ್ಳಿಯ ಬಾಗಿದತುದಿಗೆ ಗೊಂಚ-ಗೊಂಚಲಾಗಿ ಬೆಳೆದ ಮಲ್ಲಿಗೆಗಳನ್ನೇ ತಲೆ-ದೂಗುವಂಗೆ ಮಾಡ್ತಿತ್ತು.
ಇದ್ರಿಂದ, ಬಿರಿದ ಮಲ್ಲಿಗೆಹೂವಿನ ಪರಿಮಳ ಇನ್ನೂ ಹೊರಸೂಸಿ,
ಬೀಸ್ತಾಇರ ಮಂದಗಾಳಿಗೆ ಮುದನೀಡಿ, ಮಧುನ ಹೀರ ಕೆಲಸ್ದಲ್ಲಿ
ತೊಡಗಿರ ದುಂಭಿಗಳ ಹತ್ರಿಕ್ಕೆ ಹೊತ್ತುಯ್ವಂಗೆ ಮಾಡ್ತಿತ್ತು. ದುಂಭಿಗಳಾದರೋ
ದೇವ-ದೇವಿಯರ ಪೂಜೆಗೆ, ಆರಂಭದಲ್ಲಿ ಊದುವ ಶಂಖನಾದಕ್ಕೆ
ಸಮನಾಗಿ, ಝೇಂಕರಿಸ್ತಾ ಹಾರಿ ಬರ್ತಾಇದ್ದಿದ್ವು. ದೇವಾನು-ದೇವತೇಗಳೇ ಅಲ್ಲಿಗೆಬಂದು, ಕೊಡತಕ್ಕ
ಪೂಜೆನ ಸ್ವೀಕರಿಸಲೆ ಸಾಲಾಗಿ ನಿಂತಂತ ವಾತಾವರಣ ಮಲೆನಾಡಿನ
ಮದ್ಯೆ ಇದ್ದ, ಪುಟ್ಟ ಊರ, ನನ್ನ ಮನೆಯ
ಹಿತ್ಲಲ್ಲಿತ್ತು.
ನಾನು
ಆ ಸೌಂದರ್ಯ ರಾಶಿಯ ನಡುವೆ ಹೂವನ್ನೆಲ್ಲಾ ಕಿತ್ತು, ಹಚ್ಕೆಯೊಳ್ಗೆ ತುಂಬಿಸ್ತಿದ್ದೆ.
ತುಟಿಯಂಚಿನಲ್ಲಿ ಮಂದಹಾಸವಿತ್ತು. ಮನಸ್ಸು ಆಹ್ಲಾದದಿಂದಿತ್ತು.
ದೇವರ ಪಾದ-ಶಿರಗಳಿಗೆ ಸೇರುವ ಮುಂದಾಲೋಚನೆಯಿಂದಿರುವ ಹೂಗಳು,
ಸಂತೋಷದಿಂದಲೇ ಕುಕ್ಕೆಯನ್ನ ತುಂಬ್ಕೊಳ್ತಿತ್ತು. ತುಂಬಿದ
ಚೊಬ್ಬೆಯೂ, ತನ್ನ ಆಯಾಸವನ್ನ ನನ್ಕೈಗೆ ನೀಡ್ತಾಇಲ್ಯಾಗಿತ್ತು.
ಹೂ-ಕೊಯ್ಯಲು
ಬಾಗಿ, ನನ್ನ ಕೈತಾಗಿ ಅಲ್ಲಾಡಿದ, ದಾಸವಾಳ ಗಿಡದ
ಎಲೆಮೇಲಿಂದ ಹಾರಿ, ಇನ್ನೊಂದು
ಗಿಡಸೇರಿದ, ಹಸಿರು ಎಲೆಶೆಟ್ಟಿಯು, ನನ್ನ ಗಮನನ
ಆ ಕಡೆ ಸೆಳಿವಂಗೆಮಾಡ್ತು. ಸೂಕ್ಷ್ಮ ಗಮನಿಸ್ದಿ. ಎಲೆನಡುವೆ ತಾನು ಇದ್ದಿದ್ದನ್ನ ಅಷ್ಟುಸಲೀಸಾಗಿ
ಬಿಟ್ಟುಕೊಡ್ದ ಹಂಗೆ, ಅದ್ರ ಮೈ-ಬಣ್ಣ ಹಚ್ಚ-ಹಸಿರಾಗಿತ್ತು.
ಗುಂಡ-ಗುಂಡಗೇ ಆಡಿಸದೇ ಇದ್ದ ಅದರ ಕಣ್ಣುಗಳು ನನ್ನೇಕೆಕ್ಕರಿಸಿ
ನೋಡ್ತಿದ್ದಾಂಗೆ ಭಾಸಇತ್ತು. ಮೀಸೆರಡೂ ಅಪಾಯ ಯಾವದಿಕ್ನಿಂದ ಅಪ್ಪಳ್ಸಿ ಬರ್ಲಕ್ಕು
ಅನ್ನದನ್ನ ತಿಳಿಸ ಅಂಟೇಣಾದಂಗೆ ಆಕಡೆ-ಈಕಡೆ ಅಲ್ಲಾಡ್ತಾ, ಮುಂದೆ ಚಾಚ್ಕ್ಯಂಡಿರ ಕಾಲೆರಡೂ, ಬಪ್ಪ ಅಪಾಯಕ್ಕೆ ಮುನ್ಸೂಚನೆಯಾಗಿ,
ಅಲ್ಲಿಂದ ನೆಗ್ಯಲೆ ಸನ್ನದ್ಧಾಂಗಿರ್ವಂಗಿತ್ತು. ಆವಾಗ್ತಾನೇ
ಸಾವ್ಕಾಶ ಮುಚ್ತಾಇರ ಅದ್ರ ರೆಕ್ಕೆ ನಡುವೆ, ಹೊಟ್ಟೆ ಪ್ರದೇಶ್ದಲ್ಲಿ ಆತುಕೊಂಡಿದ್ದ
ಪುಟ್ಟಮರಿಯೂ ಕಂಡ್ತು. ತನ್ನ ಪಾಲಕನ ಹೊಟ್ಟೆಯನ್ನ ಗಟ್ಟಿ ಹಿಡ್ಕಂಡು ಕುತ್ಗಂಡಿತ್ತು
ಅದು. ಪಾಲಕನ ಕೈಯಂತಿರುವ ಕಾಲುಗಳೆರಡೂ ಅವಗವಾಗ ಅದ್ರ ಯೋಗಕ್ಷೇಮವನ್ನ ವಿಚಾರಿಸ್ತಿದ್ದಂಗೆ,
ಸವರಿ ಹೋಗ್ತಿತ್ತು. ತನ್ನಕಂದಮ್ಮನಿಗೆ ಯಾವರೀತಿಯೂ ಅಪಾಯ
ಬಪ್ಲಾಗಹೇಳ ಎಚ್ಚರಿಕೆ ಹುಳಕ್ಕಿತ್ತು ಅನಸ್ತು.
ಇದನ್ನ ನೊಡ್ದಾಗ, ನನ್ನ ಬಾಳಿನಲ್ಲಿ ಹತ್ತುವರ್ಷದ ಹಿಂದೆ
ನಡೆದ ಘಟನೆನ ಮತ್ತೆ ನೆನೆಯ್ವಂಗೆಮಾಡ್ತು.
"ವಿದ್ಯೆ ಹೇಳದು; ಚಿಂತನೆಗೆ ಹಚ್ಚಿಸುವಂಗೇ ಇರವೇಹೊರ್ತು,
ಚಿಂತೆಗೆ ನೂಕಲಾಗ. ನೀನು ಏಂತಾಕಲ್ತಿದ್ದೆ ಹೇಳದು ಮುಖ್ಯಅಲ್ಲ,
ಕಲ್ತಿದ್ದನ್ನ ಹೆಂಗೆ ಬಳಸ್ಕತ್ತೆ, ಬಳಸ್ಕತ್ತಾ ಇದ್ದೆ
ಎನ್ನದು. ನಾಳೆ ಸಾಯಂಕಾಲ್ದ ಬಸ್ಸಿಗೆ ನಿನ್ನ ಮುಂಬೈಗೆ ಕಳಸ್ಕೊಡ್ತಾ ಇದ್ದಿ.
ಎಲ್ಲಾ ತಯಾರ್ಮಾಡ್ಕ್ಯ."
ಆವಾಗಷ್ಟೇ
ಬಿ.ಎ. ಸೆಕೆಂಡ್ಕ್ಲಾಸ್ ರಿಸಲ್ಟ್ ಸಿಕ್ಕಿ,
ತಲೆ ಮೇಲೆ ಕೈ-ಹೊತ್ಗಂಡು ಕುತ್ಗಂಡಿದ್ದ ನಂಗೆ, ಅಪ್ಪಯ್ಯನ
ಈ ಮಾತ್ನಿಂದ ದಿಗಿಲಾತು. ಅವ್ನ ಕಣ್ಣನ್ನೇ ನೋಡ್ದಿ. ಅಲ್ಲಿ ಸಿಟ್ಟಿನ ಛಾಯೆಯೇನೂ ಇದ್ದಂಗೆ ಕಂಡುಬಂಜಿಲ್ಲೆ , ನೋವಾಗ್ಲಿ
ಕಂಡುಬಂಜಿಲ್ಲೆ. "ಅಪ್ಪಾ, ನಾ ಸೆಕೆಂಡ್
ಕ್ಲಾಸ್ ಪಾ.....!" ನನ್ನ ಮಾತ್ನರ್ಧಕ್ಕೆ ನಿಲ್ಸಿ,
"ನಂಗೆ ಗೊತ್ತಿದ್ದು" ಅಂತಷ್ಟೇ ಹೇಳಿ,
ಮುಂದೆಂತೂ ಹೇಳಅಗತ್ಯ ಇಲ್ಲೆ, ಹೇಳ ಅರ್ಥ ಕೊಟ್ಟು,
ಅಲ್ಲಿಂದ ಹೊರಹೋಗ್ಬಿಟ. ಅಪ್ಪಯ್ಯ ಯಾವಾಗ್ಲೂ ಹಂಗೇಯಾ.
ಹೆಚ್ಚುಮಾತು ನನ್ನ ಹತ್ರ ಆಡ್ದಂವಲ್ಲ. ನನ್ನ ಹತ್ರನೇ ಅಂತೇನು
ಅಲ್ಲಾ! ಯಾರತ್ರಾನೂ ಅವಶ್ಯಕತೆಗೆ ಮೀರಿ ಮಾತಾಡ್ದಂವಲ್ಲ. ಊರಮಂದಿ ಅಪ್ಪಯ್ಯಂಗೆ ವಿಶೇಷ ಮರ್ಯಾದೆ ಕೊಡ್ತ. ’ಬುದ್ಧಿವಂತ’
ಪಟ್ಟನೂ ನನ್ನಪ್ಪಂಗಿದ್ದು. ಊರ್ನಲ್ಲಿ ಏನೇ ತಂಟೆ-ತಕ್ರಾರಾದ್ರೂ, ಅದ್ಕೆ ಅಪ್ಪಂದು ಏನ್ ನ್ಯಾಯವೋ ಅದೇ ನ್ಯಾಯ. ಅದನ್ನ
ಮೀರವೂ ಯಾರೂ ಇಲ್ಲೆ.
ನಾನು
ಮಾತ್ರಾ ಇಪ್ಪತ್ತೊಂದು ದಾಟ್ತಿದ್ರೂ, ಸಣ್ಣವಂಗೇ ಇದ್ದೆ. ಅಪ್ಪಂಗೆ ತಕ್ಕ ಮಗನಲ್ಲ. ’ಹೆಸ್ರು ಚೈತನ್ಯ, ಆದ್ರೂ ಬುದ್ಢಿ ಮಾತ್ರಾ ಮಂದ!’ ಅಂತೇಳಿ ಹಂಗ್ಸ ಮಾತುಗಳು ನನ್ಕಿವಿಗೆ
ಬಂದು ಬೀಳ್ತಿತ್ತು. ನಾ-ಸಣ್ಣಕಿದ್ದಾಗ, ಆಯಿ ತನ್ನ
ಮಡ್ಳಲ್ಲಿ ತಲೆಯಿಟ್ಟು ಮಲಗ್ಸ್ಕೊಂಡು ಹೇಳ, ನಾನು ಹುಟ್ದಾಗಿನ ಕಥೆ;
’ನೀ ಹುಟ್ದಾಗ, ನಿನ್ ತಲೆ ನೇವರ್ಸಿ, ಅಪ್ಪನೇ ಈ ಹೆಸ್ರು ಇಟ್ಟಿದ್ದು, ಕೇಳಿ ತುಂಬಾ ಖುಷಿಯಾಗ್ತು"
ಅಂತೇಳಮಾತ್ನ ಕೇಳಿ ಏನೋ ಒಂತರಾ ರೋಮಾಂಚನ ಆಗ್ತಿತ್ತು. ’ಹೋಗಿ ದೇವ್ರತ್ರ ಕೇಳ್ಕ್ಯ!, ನಂಗೂ ಗನಾಬುದ್ಢಿ ಕೊಡು’
ಅಂತೇಳಿ, ಹೇಳ್ತಿಪ್ಪ ಮಾತು ಎಂತುಹೇಳೇ ಅರ್ಥಅಗ್ತಿತ್ತಿರ್ಲಿಲ್ಲೆ. ಆದ್ರೂ ಅದ್ನಮಾತ್ರಾ ತಪ್ದೇ
ಕೇಳ್ಕ್ಯತ್ತಾ ಇದ್ದಿದ್ದಿ, ”ನಂಗೂ ಬುದ್ಧಿಬರ್ವಂಗೇ ಮಾಡು’ ಕೇಳ್ವಂತ ಮಾತು! ಈವತ್ತಿಗೂ ನಂಗದೇ ದೊಡ್ಸಮಸ್ಯೆ. ಎಲ್ರೂ ಹಂಗೇ ಹೇಳ್ತ. ’ನಾನು ಬುದ್ಧಿವಂತ ಆಗಿರಕಾಗಿತ್ತು’
ಹೇಳಿ, ಆದ್ರೆ ಯಾರೂ ಹೇಳಿಕೊಟ್ಟಿದ್ವಿಲ್ಲೆ, ಬುದ್ಧಿವಂತ ಹೆಂಗೆ ಆಪ್ದು ಹೇಳಿ! ಯಾರತ್ರಾನೂ ಹೋಗಿ ಕೇಳ ಧೈರ್ಯನೂ
ನಂಗಿಲ್ಲೆ. ದೇವ್ರಹತ್ರ ಬೇಡದನ್ನ ಮಾತ್ರಾ, ಆಯಿ
ಹೇಳ್ಕೊಟ್ಟಿದ್ದು, ಅಷ್ಟೇ!
’ನೀನು ಕಾಮರ್ಸ್ಲಿ ಪಾಸ್ ಆಜಿಲ್ಯಡ, ಉಳ್ದ ಪರೀಕ್ಷೇನ ಹೆಂಗೋ ತಕ್ಕಮಟ್ಟಿಗೆ
ಮಾಡಿದ್ರಿಂದ ಅದ್ನೂಪಾಸ್ ಮಾಡಿದ್ವಡ!’ ಅಂತೇಳ ಸಹಪಾಠಿ ಮಾತು, ನನ್ನ ಪದೇ-ಪದೇ ಚುಚ್ಚುವಂಗೆ ಮಾಡ್ತಿತ್ತು. ’ಇನ್ನು ನಾ-ಮುಂಬೈಗೆ ಹೋಗಿ ಎಂತಾತಾನೇ ಮಾಡ್ಬಲ್ಲೆ?’ ಅಂತೇಳದೇ ನಂಗೀಗ ದೊಡ್ದ ಸಮಸ್ಯೆಯಾಗಿ,
ಭೂತದಂಗೆಯಾ ಕಾಡ್ತಾಇತ್ತು.
ರಾತ್ರಿ ಊಟಕ್ಕೆ ಕುತ್ಗಂಡಾಗ, ಆಯಿ ಅಪ್ಪಯ್ಯನತ್ರೆ, "ಅವಂಗೆ ಇಲ್ಲೇಎಲ್ಲಾದ್ರೂ ಕೆಲ್ಸ
ನೋಡ್ಳಾಗಿತ್ತಿಲ್ಯಾ?, ಅವ್ನ್ವಿಷ್ಯ ನಿಮ್ಗೇ ಗೊತ್ತಿಲ್ಯಾ? ಸಣ್ಣಿದ್ದಾಂಗಿಂದ ನಮ್ಮನ್ನ ಬಿಟ್ಟಿದ್ದಿಲ್ಲೆ. ಈಗ ಆತುದಿಗೆ ಕಳ್ಸವಶ್ಯಕತೆ
ಆದ್ರೂ ಎಂತಾ ಇದ್ದು? ನಮಗಾದ್ರೂ ಎಂತಾಕಮ್ಮಿ ಇದ್ದು? ಇರಂವ ಒಬ್ಬವ್ನೇ ಮಗಾಅಲ್ದಾ?" ಅಂತೇಳ್ತಾ,”ತನ್ನಲಿರ ಕರುಳಿನ ಬಳ್ಳಿನ ದೂರಕ್ಕೆ ಕಳ್ಸವಲಿ,’ ಅಂತೇಳ ನೋವ್ನೇ
ನುಂಕೊಳ್ತಾ ಹೇಳ್ಚು. ಅಪ್ಪಯ್ಯಾ ಆ ಮಾತಿಗೂ ಎಂತೊಂದೂ ಮಾತ್ನೂಆಡ್ದೇ.
ಸುಮ್ನೇ ಊಟಮುಗ್ಸಿ, ಎದ್ದೋಗ್ಬಿಟ. ನಾನ್ಮಾತ್ರಾ ಹಸಿವೆಹೊಟ್ಟೆಗೆ ಅನ್ನನ್ನೂ ಹಾಕ್ದೇ ಇಪ್ಪಸ್ಥಿತಿಯಿಂದ ಎದ್ಬಿಟಿ.
ಆ
ರಾತ್ರಿನೂ ನಿದ್ದೆಮಾಡ ಸ್ಥಿತಿನೂ ನಂಗಿಲ್ಯಾಗಿತ್ತು. ಅಪ್ಪಯ್ಯಾ ಹೇಳಿದ್ದಿಷ್ಟೇ,"
’ನನ್ನ ಮುಂಬೈಗೆ ಕಳಸ್ತಾ ಇದ್ದಿ’ ಅಂತೇಳಿ, ಅಲ್ಲಿಹೋಗಿ ಏನು ಮಾಡವು ಅಂತನೂ ಹೇಳಿದ್ನಿಲ್ಲೆ! ಗೊತ್ತಿಲ್ದೇ
ಇರ ಊರು, ಜನ, ಭಾಷೆ. ಎಂತಾ ಮಾಡದು?" ಅನ್ನುವ ನೂರಾರು ಯೋಚ್ನೆ ನನ್ನ ಮನಸ್ನ ಕಿತ್ತುತಿನ್ತಿತ್ತು.
ಸುಮ್ಮನೇ ಹೊರಳ್ತಾ ಬೆಳಗು ಮಾಡಿದಿ.
ಆ ದಿನ ಪೂರ್ತಿ, ಹೋಪ್ಲೆ ಏರ್ಪಾಡು ಮಾಡಲೇ ಕಳೆದೋತು. ಸಂಜೆಯಾಗೇ ಬಿಡ್ತು.
ಅಪ್ಪಯ್ಯಾ ನನ್ನ ಬಸ್ ಹತ್ಸಲೆ ಬರಂವ ಇದ್ದಿದ್ದ. ನಾ ದೇವ್ರಿಗೆ
ನಮಸ್ಕಾರ ಮಾಡಿ, ಆಯಿಗೂ ನಮಸ್ಕಾರ ಮಾಡದಿ. ಒಪ್ದೇ
ಇರ ಮನಸ್ನಿಂದ,ಆಯಿ ನನ್ನ ಕಳುಹಿಸಿ ಕೊಡ್ತಾ ಇದ್ದು ಅನ್ನದು ನಂಗೆ,
ಇನ್ನೇನು ಜಾರಲೆ ತಯಾರಿದ್ದ ಅವಳ
ಕಣ್ಣೀರೇ ಸಾರಿ-ಸಾರಿ ಹೇಳ್ತಾ ಇತ್ತು. ಅಪ್ಪಯ್ಯಂಗೂ
ನಮಸ್ಕಾರ ಮಾಡ ಮನಸ್ಸಿದ್ರೂ, ಮಾಡ ಧೈರ್ಯಸಾಲಿದ್ದಿಲ್ಲೆ. ಊರು ತಣ್ಣಗೆ ನನ್ನ ಬೀಳ್ಕೊಡ್ತು.
ಅಪ್ಪ
ಮೌನವಾಗೇ ಸ್ಕೂಟರ್ ನಡಸ್ತಾ ಇದ್ದಿದ್ದ. ನಾನೂ ಅಷ್ಟೇ ಸುಮ್ಮಂಗೇ ಕುತ್ಗಂಡಿದ್ದೆ.
ದಾರಿಮಧ್ಯದಲ್ಲಿ ಗಾಡಿನ ನಿಲ್ಲಸ್ದಾ. ಅಂವ ಇಳಿಯ ಮುನ್ಸೂಚನೆಯನ್ನ ನೋಡಿ,
ನಾನೂ ಇಳ್ದೆ. ಗಾಡೀನ್ನ ಸ್ಟೇಂಡ್ ಹಾಕಿ, ನನ್ನ ಹತ್ರ ಬಂದು ಗಟ್ಟಿಯಾಗಿ ತಬ್ಕ್ಯಂಡ್ಬಿಟ್ಟ.
ನಂಗೆ ಆಶ್ಚರ್ಯನೂ, ಮತ್ತೆ ಹೆದರಿಕೆನೂ ಆಗೋತು.
ನನ್ನ ಹೆಗಲು ತಂಪಾಗ್ತಾ ಇರದು ಅನುಭವಕ್ಬಂದು, ಅಪ್ಪಯ್ಯ ಅಳ್ತಾಇದ್ದ ಹೇಳದು ಗೊತ್ತಾತು. ಗಟ್ಟಿಮನಸ್ಸಿನ ಅಪ್ಪಾ ಹೀಂಗೆ ಕರಗ್ತಾ ಇರದ್ನ ನೋಡಿ ನಂಗೆ, ಎಂತಾ
ಮಾಡಲೂ ತೋಚ್ದೇ ಹಂಗೇ ಸುಮ್ನೇ ನಿಂತಿದ್ದೆ. ಅವಂಗೇ ಅವ್ನೇ ಸಮಾಧಾನ ಮಾಡ್ಕ್ಯಂಡ
ಅನಸ್ತು, ನನ್ನ ಹೆಗ್ಲಮೇಲೆ ಕೈ-ಹಾಕಿ, ಪಾದದಿಂದ
ಶಿರದವರೆಗೆ ನನ್ನ ನೋಡಿ, ’ನಿನ್ನಂತ ಮಗನ್ನ ಪಡಿಯಲೆ ನಾನೆಷ್ಟು ಜನ್ಮದ್ಪುಣ್ಯ
ಮಾಡಿದ್ನೇನೋ!’ ಅಂತೇಳ್ದ. ನಂಗೆ ಒಂದ್ಸುತ್ತು
ಆಶ್ಚರ್ಯದ ಮೇಲೆ ಆಶ್ಚರ್ಯ.”ಊರಿನವೆಲ್ಲಾ ಪೆದ್ದು, ಪೆದ್ದು ಎಂದು ಹಂಗಿಸ್ತಾ ಇರಕಿರೆ.ಆಯಿ ಜನ್ಮ-ಜನ್ಮದ ಕರ್ಮಗಳ್ನ ನೆನೆನ್ಸಿ ಕೊರಗ್ತಿರಕಿರೆ, ಅಪ್ಪಯ್ಯಾ ಮಾತ್ರಾ
ಪುಣ್ಯ ಅಂತೇಳ್ತಾ ಇದ್ನಲಿ! ಇವಂಗೆಂತಾತು ಈಗ?’ ಅಂದ್ಕಳ್ತಾ ಅವನ್ನೇ ನೋಡ್ದೆ.
ಮತ್ತೆ
ಸ್ವಲ್ಪ ನಗೆಯಾಡಿ ಹೇಳಲೆ ಶುರುಮಾಡ್ದ, "ನನ್ನ ರೀತಿಂದ ನಿಂಗೆ ಆಶ್ಚರ್ಯ
ಆಗಿರ್ತು. ಯಾವತ್ತೂ ಹೆಚ್ಚುಮಾತ್ನಾಡದಂವ, ಇವತ್ತೆಂತಕ್ಕೆ
ಹಿಂಗಾಡ್ತಾ ಇದ್ದ ಅಂತೇಳಿ!?, ಯಾವತ್ತೂ ಪ್ರೀತೀಂದ ಮಾತ್ನಾಡ್ಸದೇ ಇದ್ದಂವ,
ಇವತ್ತೆಂತಕ್ಕೆ ತಬ್ಕೊಂಡಾಂತೇಳಿ!? ಗಂಭೀರ ಮುಖಭಾವದ ಅಪ್ಪಾ
ಇವತ್ತೆಂತಕ್ಕೆ ಅಳ್ತಾಇದ್ದಾಂತೇಳಿ!? ಊರಲ್ಲಲ್ಲೆಲ್ಲಾ ನೀನು ’ನನ್ಮಗನಾಗಿ ಹುಟ್ಟಿ ಬರಕಾಗಿತ್ತಿಲ್ಲೆ’ ಅಂತೇಳಿ, ನಿನ್ಬಗ್ಗೆ ಸಲ್ಲದ ಮಾತಾಡ್ತಾ ಇರಕಿರೆ, ಈಗೆಂತಕ್ಕೆ ಪುಣ್ಯದ ಮಾತ್ನಾಡ್ತಾ ಇದ್ದ ಅಂತೇಳಿ!? ಮಗನೇ,
ನಾನು ಯಾವತ್ತೂ, ಯಾರತ್ರಾನೂ ನನ್ಮನಸ್ನ ಬಿಚ್ಚಿಟ್ಟಿದ್ದಿಲ್ಲೆ.
ಎಲ್ರೂ ಒಂದೊಂದು ಮುಖವಾಡನ ಧರಿಸಿ ನಿಂತ್ಗಂಡಿದ್ದ. ನನ್ನ
ಗಂಭೀರತೆನೂ ಒಂದು ಮುಖವಾಡನೇ! ನಿನ್ನ ಪೆದ್ದುತನದ ಮುಖವಾಡದಂಗೇ ಇರ ನನ್ನೊಂದು!
ನಂಗೆ ಗೊತ್ತಿದ್ದು, ನೀನು ಪೆದ್ದ ಅಲ್ಲಹೇಳಿ. ನಾನು ನಿನ್ನ ಪ್ರಕೃತಿಯ ಮಡ್ಳಲ್ಲಿ ಒಂದಾಗಿ, ಮೈ-ಮರೆತಿದ್ನ ಗಮನ್ಸಿದ್ದಿ.
ದೇವರ ಪೂಜೆ ಸಮಯ್ದಲ್ಲಿ, ಧ್ಯಾನದಲ್ಲಿ ತನ್ಮಯಆಗಿರದನ್ನ ಗಮನ್ಸಿದ್ದಿ. ಆಯಿ ಮಡ್ಳಲ್ಲಿ ಮಲ್ಕಂಡಿದ್ದಾಗ, ಕರುಳಿನ ಕುಡಿಯಾದ್ದನ್ನ ಗಮನ್ಸಿದ್ದಿ. ನನ್ನ ಸೇವೆ ಮಾಡಕಿರೆ ನಿನ್ಕಣ್ಣಲ್ಲಿ ನನ್ನ ನಾಕಂಡಿದ್ದಿ. ನಿನ್ನ
ಪುಸ್ತಕದ ಕೊನೆಯ ಹಾಳೇಲ್ಲಿ ಬರ್ಕಂಡಿದ್ದ "ನಾಮವನ್ನ ಹಾಕಿಕೊಂಡಿರುವರೆಲ್ಲಾ
ಪಂಡಿತರೇನು ಅಲ್ಲಾ! ಕಾವಿಗಳ ಧರಿಸಿಬಿಟ್ಟರೆ ತ್ಯಾಗಿಯಾಗಲಾರ! ಅಂತಸ್ತನ್ನ ಕಟ್ಟಿಸಿದವನು ಶ್ರೀಮಂತನೇನು ಅಲ್ಲಾ! ತನ್ನ ತಾನರಿತವನೇ
ಎಲ್ಲದಕ್ಕೂ ಈಶ" ಎನ್ನುವ ವಾಕ್ಯನೂ ಓದಿದ್ದಿ.
ಇದ್ನೆಲ್ಲಾ
ತಿಳ್ಕಂಡ ನಾನೆಂಗೆ ಹೇಳ್ಳೋ, ನೀನು ಪೆದ್ದು ಅಂತೇಳಿ? ನೀನು ಬುದ್ಢಿವಂತರಲ್ಲಿ, ಬುದ್ಧಿವಂತ. ನಿನಗಿಟ್ಟ ’ಚೈತನ್ಯ’ ಹೇಳ ಹೆಸರು ಸಾರ್ಥಕವಾಜು. ಈಗನಿನ್ನ
ಮುಖವಾಡನ ಕಳಚ ಸಮಯ ಬಂಜು. ನೀನು ನಿಜವಾಗ್ಲೂ ಯಾರು ಅಂತೇಳದ್ನ ಎಲ್ರಿಗೂ
ತಿಳಿವಂಗೆ ಮಾಡು. ಪ್ರಬುದ್ಧತೆ ಎನ್ನುವುದು ಹಂಗೇ ಎಲ್ಲರಿಗೂ ಬರುವಂತದ್ದಲ್ಲ.
ಇದೇ ವಯಸ್ಸಿನಲ್ಲಿ ಬರ್ತು ಅಂತೇನೂ ಇಲ್ಲೆ. ಅದೊಂದು ಮಾಯಾಜಿಂಕೆಹಂಗೇ! ಎಲ್ಲರನ್ನೂ, ತಾನೇ ಪ್ರಬುದ್ಧನೆಂಬ ಭ್ರಮೆಯಲ್ಲಿ ಬೀಳಿಸಿ ಉಸಿರುಗಟ್ಟಿಸ್ತಾ ಇರ್ತು. ಅದು ನಿಜವಾದ ಪ್ರಬುದ್ಧತೆಯಲ್ಲ ಅಂತೇಳಿ ತಿಳಿಯುವ ಹೊತ್ತಿಗೆ ಕಣ್ಣು ಮಂಜಾಗಿರ್ತು,
ಮಾತು ನಡಗ್ತಾ ಇರ್ತು. ಚರ್ಮ ಸುಕ್ಕುಗಟ್ಟಿ ತನ್ನ ಸೌಂದರ್ಯನೆಲ್ಲಾ
ಕಳೆದುಕೊಂಡಿರ್ತು, ಆದ್ರೆ ನನ್ನಮಗ ಈಗಲೇ ಪ್ರಬುದ್ಧ ಆಗೋಜ. ಹೇಳು, ನೀನ್ನಂತ ಮಗನ್ನ ಪಡೆದಿದ್ದಕ್ಕೆ, ನಾನು ಪುಣ್ಯವಂತನೇ ಅಲ್ದಾ? ಇದು ನಿನ್ನ ಒಂದು ಘಟ್ಟದ ಉನ್ನತಿ.
ನೀನು ಮನಸ್ಸಿನಲ್ಲಿ ಸುಖವಾಗಿ ಬದುಕುವುದನ್ನ
ಕಲಿತಿದ್ದೆ. ಬೇರೆವ್ರ ಮನಸ್ಸಿಗೆ ಆನಂದನೂ ಕೊಡಬಲ್ಲೆ. ಆದ್ರೆ ನೀ ಇನ್ನೂ ಆಧುನಿಕನಾಜಿಲ್ಲೆ. ಅದನ್ನ ಕಲ್ಸಲೇ ಹೇಳೆ ನಿನ್ನ
ಮುಂಬೈಗೆ ಕಳಸ್ತಾ ಇದ್ದಿ. ಅಲ್ಲಿ ನನ್ನ ಸ್ನೇಹಿತ ನರಸಿಂಹ ಇದ್ದ,
ಅಂವ ನಿಂಗೆ ಆಧುನಿಕವಾಗುವುದನ್ನ ಕಲಿಸಿ ಕೊಡ್ತಾ." ಅಂತೇಳ್ತಾ ಇದ್ದಂಗೆ, ಅಳುವ ಪಾಲು ಈಗ ನಂದಾತು.
"ನನ್ನ ಅಪ್ಪಯ್ಯಾ, ನಂಗೆ ತಿಳಿದೇ ಇದ್ದಂಗೇಯಾ,
ನನ್ನ ಗಮನಿಸ್ತಿದ್ದಿದ್ದ. ಮೌನದಿಂದ ಇದ್ದ ಅಂದತಕ್ಷಣ ಅವಂಗೆ ನನ್ಮೇಲೆ ಪ್ರೀತಿನೇ ಇಲ್ಲ ಅಂತರ್ಥಲ್ಲ!
ಮತ್ತಲ್ದೇ, ನನ್ನ ಎಂದೆಂದಿಗೂ ಕಾಡಿಸ್ತಾ ಇದ್ದ ’ಬುದ್ದಿವಂತನಾರು!?’ ಎಂಬ ಪ್ರಶ್ನೆಗೆ ಉತ್ತರ ನಂಗೀಗ ಸಿಕ್ಕಿದ್ದು!
’ನಾನೇ ಬುದ್ದಿವಂತ!’ ನನ್ನ ಮನಸ್ಸಿನ ಆನಂದಕ್ಕೆ ಪಾರವೇ
ಸಿಕ್ಕಿದ್ದಿಲ್ಲೆ. ಆ ಸಂತೋಷನ್ನ ಹೇಂಗೆ ತೋರಿಸ್ಕಳವು ಹೇಳದೇ ತೋಚ್ದೇನೇ,
ಅವೆಲ್ಲವೂ ಕಣ್ಣಿನ ಮೂಲಕ ಹೊರಜಿಗಿತಾ ಇದ್ದಂಗೆ, ಕಣ್ಣಲ್ಲಿ
ನೀರು ತುಂಬಿ ತುಂಬಿ ಬರ್ತಾ ಇತ್ತು. ಅಪ್ಪಯ್ಯನ್ನ ಹಂಗೇ ತಬ್ಬಿನಿಂತಿದ್ದೆ.
ಅಂವ ತನ್ನ ಕೈ-ಗಳಿಂದ ನನ್ನ ಬೆನ್ನನ್ನ ಪ್ರೀತಿಯಿಂದ ಸವರ್ತಿದ್ದ.
"ಪಪ್ಪಾ.." ಎಂದು ಮುದ್ದಾಗಿ ಕರೆದ ನನ್ನ ಎರಡು ವರ್ಷದ ಪುಟ್ಟ
ಆನಂದಿಯ ತೊದಲು ಮಾತಿಗೆ ಮತ್ತೆ ವಾಸ್ತವಕ್ಕೆ ಬಂದಿಳ್ದಿ ನಾನು. ಅವಳು ತನ್ನ
ಪುಟ್ಟ-ಪುಟ್ಟ ಹೆಜ್ಜೆಗಳನ್ನಿಡ್ತಾ ನನ್ನಹತ್ರಕೆ ಓಡಿಬರ್ತಿದ್ಲು.
ನಾನು ಆ ಕ್ಷಣ ಕೈಯಲ್ಲಿದ್ದ ಬುಟ್ಟಿನ್ನ ಕೆಳಗಿಟ್ಟು ಅವಳನ್ನ ಎತ್ಕಂಡಿ.
ಅಲ್ಲೇ ಅಂಗಳದ ಅಟ್ಟದ ಮ್ಯಾಲೆ ಚಳಿ ಕಾಸಲು ನಿಂತ ಅಪ್ಪಯ್ಯ ನಂಗ್ಳನ್ನೇ ನೋಡ್ತಾ ಇದ್ದ.
ನಾ ಅದ್ನ ಗಮನ್ಸಿದ್ದ ನೋಡಿ ಮತ್ತೆಲ್ಲೋ ನೋಡ್ತಾ ಇದ್ದಂಗೆ ಮಾಡ್ತಿದ್ದ ಅನ್ನದು ನನ್
ಗಮನಕ್ಕೆ ಬಂಜಿಲ್ಲೆ ಅಂತೇನಿಲ್ಲೆ. ಜೊತೆ-ಜೊತೆ
ಅವ್ನ ಮುಖದ ಮಂದಹಾಸನೂ....!!
ಮುಗಿಯಿತು..
ಮೊದಲ ಚಿತ್ರಕೃಪೆ: ದಿನೇಶ ಹೇಗಡೆ.
ಎರಡನೆಯದು: ಗೂಗಲ್, ಧನ್ಯವಾದಗಳು.